ADVERTISEMENT

ದ್ರೋಣಾಚಾರ್ಯ ಪ್ರಶಸ್ತಿ ಮರಳಿಸಲು ಮಂದಾದ ಮಾಜಿ ಬಾಕ್ಸಿಂಗ್‌ ಕೋಚ್‌ ಸಂಧು

ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರಿಗೆ ಬೆಂಬಲ

ಪಿಟಿಐ
Published 4 ಡಿಸೆಂಬರ್ 2020, 11:39 IST
Last Updated 4 ಡಿಸೆಂಬರ್ 2020, 11:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದ್ರೋಣಾಚಾರ್ಯ ಪುರಸ್ಕಾರವನ್ನು ಮರಳಿಸುವುದಾಗಿ ಭಾರತದ ಮಾಜಿ ಬಾಕ್ಸಿಂಗ್ ಕೋಚ್‌ ಗುರುಬಕ್ಷ್‌ ಸಿಂಗ್ ಸಂಧು ಶುಕ್ರವಾರ ಹೇಳಿದ್ದಾರೆ. ಗುರುಬಕ್ಷ್ ಅವರು ತರಬೇತುದಾರರಾಗಿದ್ದ ಸಂದರ್ಭದಲ್ಲೇ ಬಾಕ್ಸಿಂಗ್‌ ಕ್ರೀಡೆಯಲ್ಲಿ ಭಾರತ ಮೊದಲ ಬಾರಿ ಒಲಿಂಪಿಕ್ಸ್‌ ಪದಕ ಗೆದ್ದುಕೊಂಡಿತ್ತು.

ಎರಡು ದಶಕಗಳಿಗಿಂತ ಹೆಚ್ಚು ಕಾಲ ಭಾರತ ಪುರುಷರ ತಂಡದ ಕೋಚ್ ಆಗಿದ್ದ ಸಂಧು, ಆ ಬಳಿಕ ಮಹಿಳಾ ತಂಡದ ಜವಾಬ್ದಾರಿಯನ್ನು ನಿಭಾಯಿಸಿದ್ದರು.

‘ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೊರೆಯುವ ಚಳಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಪ್ರಶಸ್ತಿ ಮರಳಿಸುವ ಮೂಲಕ ನಾನು ಅವರ ಅವರ ಬೆಂಬಲಕ್ಕೆ ನಿಲ್ಲುವೆ. ಹೀಗೆ ಮಾಡುವುದರಿಂದ ಬಹುದೊಡ್ಡ ಒತ್ತಡದಿಂದ ಮುಕ್ತನಾಗುತ್ತೇನೆ. ನಾನೂ ರೈತ ಕುಟುಂಬದಿಂದ ಬಂದವನು. ಅವರ ಬೇಡಿಕೆ ಈಡೇರಿಸಬೇಕು. ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಫಲಪ್ರದವಾಗದಿದ್ದರೆ ನಾನು ಪ್ರಶಸ್ತಿ ಮರಳಿಸುವೆ‘ ಎಂದು ಸಂಧು ಹೇಳಿದ್ದಾರೆ.

ADVERTISEMENT

ಸಂಧು ರಾಷ್ಟ್ರೀಯ ಕೋಚ್ ಆಗಿದ್ದ ವೇಳೆ, ಬಾಕ್ಸರ್ ವಿಜೇಂದರ್‌ ಸಿಂಗ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ಗೆ ಭಾರತದ ಎಂಟು ಬಾಕ್ಸರ್‌ಗಳು ಅರ್ಹತೆ ಪಡೆದುಕೊಂಡಿದ್ದರು. ಇವರೆಲ್ಲರಿಗೂ ಸಂಧು ತರಬೇತಿ ನೀಡಿದ್ದರು.

ಸಂಧು ಅವರು 1998ರಲ್ಲಿ ದ್ರೋಣಾಚಾರ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.