
ಚೆನ್ನೈ: ಭಾರತದ ಹರ್ಮೀತ್ ದೇಸಾಯಿ– ಯಶಸ್ವಿನಿ ಘೋರ್ಪಡೆ ಜೋಡಿಯು ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಶನಿವಾರ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಪುರುಷರ ಸಿಂಗಲ್ಸ್ನಲ್ಲಿ ಜಿ. ಸತ್ಯನ್ ಅವರು ಎಂಟರ ಘಟ್ಟ ತಲುಪಿದರು.
ನಾಲ್ಕನೇ ಶ್ರೇಯಾಂಕದ ಗುಜರಾತ್ನ ಹರ್ಮೀತ್ ಹಾಗೂ ಕರ್ನಾಟಕದ ಯಶಸ್ವಿನಿ ಅವರು ಸೆಮಿಫೈನಲ್ ಪಂದ್ಯದಲ್ಲಿ ಪಯಾಸ್ ಜೈನ್– ಸಿಂಡ್ರೆಲಾ ದಾಸ್ ಜೋಡಿ ವಿರುದ್ಧ 3–0ಯಿಂದ (11–9, 11–6, 11–9) ನೇರ ಗೇಮ್ಗಳಲ್ಲಿ ಗೆದ್ದರು. ಫೈನಲ್ನಲ್ಲಿ ಭಾರತದ ಜೋಡಿಯು ಎರಡನೇ ಶ್ರೇಯಾಂಕದ ಎಡ್ವರ್ಡ್ ಇಯೊನೆಸ್ಕು– ಬರ್ನಡೆಟ್ ಝೋಕ್ಸ್ (ರೊಮೇನಿಯಾ) ಜೋಡಿಯನ್ನು ಎದುರಿಸಲಿದೆ.
ಸತ್ಯನ್ ಅವರು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 3–2ರಿಂದ (9–11, 11–3, 10–12, 11–7, 11–5) ಇಯೊನೆಸ್ಕು ವಿರುದ್ಧ ರೋಚಕ ಜಯ ಸಾಧಿಸಿದರು.
ಆದರೆ, ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಹೋರಾಟ ಅಂತ್ಯಗೊಂಡಿತು. ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನಿತ್ಯಾ ಮಣಿ 1–3ರಿಂದ (11–9, 5–11, 6–11, 8–11) ತೈವಾನ್ನ ಶೆಂಗ್ ಇ–ಶಿಂಗ್ ವಿರುದ್ಧ ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.