
ಬೆಂಗಳೂರು: ಬಾಗಲಕೋಟೆಯ ಬಸಪ್ಪ ತೇರದಾಳ ಅವರು ಚೊಚ್ಚಲ ಆವೃತ್ತಿಯ ಎಚ್ಸಿಎಲ್ ಸೈಕ್ಲೊಥಾನ್ ಬೆಂಗಳೂರು ಸ್ಪರ್ಧೆಯ ಅಮೆಚೂರ್ ರೋಡ್ ರೇಸ್ 50 ಕಿ.ಮೀ. ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಎಚ್.ಎನ್.ನಾಗಶ್ರೀ ಮೊದಲ ರನ್ನರ್ಸ್ಅಪ್ ಆದರು.
ಹೊಸಕೆರಹಳ್ಳಿಯ ನೈಸ್ ರಸ್ತೆಯ ಟೋಲ್ಗೇಟ್ ಬಳಿ ಭಾನುವಾರ ಬೆಳಿಗ್ಗೆ ಸ್ಪರ್ಧೆಗಳು ನಡೆದವು. ವೃತ್ತಿಪರ 48 ಕಿ.ಮೀ. ರೋಡ್ ರೇಸ್ ವಿಭಾಗದಲ್ಲಿ ಪಂಜಾಬ್ನ ಹರ್ಷವೀರ್ ಸಿಂಗ್ ಪ್ರಶಸ್ತಿ ಜಯಿಸಿದರೆ, ವಾಯುಪಡೆಯ ಸಾಹಿಲ್ ಕುಮಾರ್ ಹಾಗೂ ಕನ್ನಡಿಗ ನವೀನ್ ಜಾನ್ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ಸ್ಅಪ್ ಆದರು. ಮಹಿಳೆಯರ ವಿಭಾಗದಲ್ಲಿ ಒಡಿಶಾದ ಸ್ವಸ್ತಿ ಸಿಂಗ್ ಚಾಂಪಿಯನ್ ಆದರು.
ಅಮೆಚೂರ್ ಪುರುಷರ 32 ಕಿ.ಮೀ. ಎಂಟಿಬಿ (ಮೌಂಟನ್ ಬೈಕ್) ಸ್ಪರ್ಧೆಯಲ್ಲಿ ಮೈಸೂರಿನ ಅಚಲ್ ಹೆಬ್ಬಾರ್ ಮೊದಲ ರನ್ನರ್ಸ್ಅಪ್ ಆದರು. ರಹೀಲ್ ಭಾಟಿಯಾ ಪ್ರಶಸ್ತಿ ಗೆದ್ದರೆ, ಕುತ್ಬುದ್ದೀನ್ ಶೇಕ್ ಬಶೀರ್ ಎರಡನೇ ರನ್ನರ್ಸ್ಅಪ್ ಆದರು.
ಅಮೆಚೂರ್ ರೋಡ್ ರೇಸ್ 50 ಕಿ.ಮೀ. ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಹರ್ಷ ಪವಾರ್ ಹಾಗೂ ತಮಿಳುನಾಡಿನ ಮುಹಮ್ಮದ್ ತಹಾ ಶರಫ್ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ಸ್ಅಪ್ ಆದರು. ಮಹಿಳೆಯರ ವಿಭಾಗದಲ್ಲಿ ಗುಜರಾತ್ನ ಅರ್ಪಿತಾ ಕೆ. ಪಾಂಡ್ಯ ಪ್ರಶಸ್ತಿ ಗೆದ್ದರೆ, ವಿಶು ಧಾಮ ಎರಡನೇ ರನ್ನರ್ಸ್ ಅಪ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.