ಹುಬ್ಬಳ್ಳಿ: ನಗರದ ವೈದ್ಯೆ ಶಾಂತಲಾ ಯೋಗಿ ಕಂಪಾಪುರಮಠ್ ಅವರು, ಸ್ಪೇನ್ನಲ್ಲಿ ನ. 28ರಿಂದ ಡಿ. 4ರ ವರೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಆಯೋಜಿಸಿರುವ ವಿಶ್ವ ಸೀನಿಯರ್ಸ್ (ಮಾಸ್ಟರ್ಸ್) ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ.
ಶಾಂತಲಾ 40 ವರ್ಷ ಮೇಲಿನವರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ನೆಲ್ಲೈ ಗಾಂಧಿಮತಿ ಶಾಂತನಮ್ ಮತ್ತು ಮಿಶ್ರ ಡಬಲ್ಸ್ನಲ್ಲಿ ದೆಹಲಿಯ ರುದ್ರ ಕೌಶಿಕ್ ಜೊತೆ ಭಾರತದ ಸವಾಲು ಮುನ್ನಡೆಸಲಿದ್ದಾರೆ.
2015–16ರಿಂದ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. ರಾಷ್ಟ್ರೀಯ ಮಾಸ್ಟರ್ಸ್ ಬ್ಯಾಡ್ಮಿಂಟನ್ನಲ್ಲಿ ಆರು ಬಾರಿ, ರಾಷ್ಟ್ರೀಯ ರ್ಯಾಂಕಿಂಗ್ ಟೂರ್ನಿಗಳಲ್ಲಿ ಐದು ಬಾರಿ ಪಾಲ್ಗೊಂಡಿದ್ದಾರೆ.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಕ್ರೀಡಾ ಗಾಯಗಳ ಚಿಕಿತ್ಸೆಗೆ ನೆರವಾಗುವ ಫಿಸಿಯೊಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಾಲಾ ಹಂತದಲ್ಲಿ ಬ್ಯಾಸ್ಕೆಟ್ಬಾಲ್ ಮತ್ತು ಅಥ್ಲೆಟಿಕ್ಸ್ನಲ್ಲಿ ಪಾಲ್ಗೊಂಡಿದ್ದರು.
1993ರಲ್ಲಿ ಕರ್ನಾಟಕ ಬ್ಯಾಸ್ಕೆಟ್ಬಾಲ್ ತಂಡ ರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್ ಆದಾಗ ಶಾಂತಲಾ ರಾಜ್ಯ ತಂಡದ ನಾಯಕಿಯಾಗಿದ್ದರು. 1997ರಲ್ಲಿ ರಾಜ್ಯ ತಂಡ ದೆಹಲಿಯಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದಾಗ ತಂಡದಲ್ಲಿದ್ದರು.
2020ರಲ್ಲಿ ಶ್ರೀಲಂಕಾದಲ್ಲಿ ಆಯೋಜನೆಯಾಗಿದ್ದ ಏಷ್ಯನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಗೆ ಶಾಂತಲಾ ಆಯ್ಕೆಯಾಗಿದ್ದರು. ಕೋವಿಡ್ ಕಾರಣದಿಂದಾಗಿ ಟೂರ್ನಿ ರದ್ದಾಗಿತ್ತು. ಹೀಗಾಗಿ ಇದು ಅವರಿಗೆ ಮೊದಲ ಅಂತರರಾಷ್ಟ್ರೀಯ ಟೂರ್ನಿಯಾಗಿದೆ.
ಈ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅವರು ‘ದೇಶಕ್ಕಾಗಿ ಆಡುವುದು ಯಾವಾಗಲೂ ಖುಷಿ ಕೊಡುತ್ತದೆ. ದೇಶವನ್ನು ಪ್ರತಿನಿಧಿಸಬೇಕು, ಜಾಗತಿಕ ಕ್ರೀಡಾ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಎತ್ತಿ ಹಿಡಿಯಬೇಕು ಎನ್ನುವ ಬಾಲ್ಯದ ಕನಸು ಈಗ ನನಸಾಗಿದೆ. ಈ ಅವಕಾಶ ಸಮರ್ಥವಾಗಿ ಬಳಸಿಕೊಳ್ಳುತ್ತೇನೆ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿಯೇ ಕಠಿಣವಾಗಿ ಫಿಟ್ನೆಸ್ ಅಭ್ಯಾಸ ಮಾಡಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.