ಆಹಸ್, ಡೆನ್ಮಾರ್ಕ್: ಭಾರತ ಪುರುಷರ ತಂಡವು ಥಾಮಸ್ ಕಪ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ 5–0ಯಿಂದ ಡೆನ್ಮಾರ್ಕ್ ತಂಡವನ್ನು ಮಣಿಸಿದೆ.
‘ಸಿ’ ಗುಂಪಿನ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅಂಗಣಕ್ಕಿಳಿದ ಭಾರತದ ಕಿದಂಬಿ ಶ್ರೀಕಾಂತ್ 21-12 21-14ರಿಂದ ಜೋರಾನ್ ಕ್ವೀಕೆಲ್ ಅವರ ಸವಾಲು ಮೀರಿದರು. ಇದೇ ಹಾದಿಯಲ್ಲಿ ಸಾಗಿದ ಡಬಲ್ಸ್ ವಿಭಾಗದ ಜೋಡಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಕೂಡ ಜಯ ದಾಖಲಿಸಿದರು. ನೆದರ್ಲೆಂಡ್ಸ್ನ ರುಬೆನ್ ಜಿಲೆ– ಟಿಯೆಸ್ ವ್ಯಾನ್ ಡರ್ ಲೆಕ್ ಅವರನ್ನು 21-19 21-12ರಿಂದ ಪರಾಭವಗೊಳಿಸಿದರು.
ಎದುರಾಳಿ ತಂಡದ ಎದುರು 2–0ಯಿಂದ ಮುನ್ನಡೆ ಗಳಿಸಿದ ಭಾರತ ಅದೇ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿತು. ಎರಡನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಕಣಕ್ಕಿಳಿದ ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಅವರು 21-4 21-12ರಿಂದ ರಾಬಿನ್ ಮೆಸ್ಮನ್ ಅವರನ್ನು ಮಣಿಸಿದರು. ಕೇವಲ 27 ನಿಮಿಷಗಳಲ್ಲಿ ನೆದರ್ಲೆಂಡ್ಸ್ ಆಟಗಾರನಿಗೆ ಸೋಲಿನ ರುಚಿ ತೋರಿಸಿದರು.
ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಎಂ.ಆರ್.ಅರ್ಜುನ್ – ಧ್ರುವ ಕಪಿಲ ಜೋಡಿಯೂ ಪಾರಮ್ಯ ಮೆರೆಯಿತು. ಇವರಿಬ್ಬರು 21-12 21-13ರಿಂದ ಆ್ಯಂಡಿ ಜೈಜಕ್– ಬ್ರಯಾನ್ ವಾಸಿಂಕ್ ಎದುರು ಜಯಿಸಿ ಭಾರತಕ್ಕೆ 4–0 ಮುನ್ನಡೆ ದೊರಕಿಸಿಕೊಟ್ಟರು. ಸಿಂಗಲ್ಸ್ ವಿಭಾಗದ ಕೊನೆಯ ಹಣಾಹಣಿಯಲ್ಲಿ ಸಮೀರ್ ವರ್ಮಾ ಕೂಡ ಅಬ್ಬರಿಸುವುದರೊಂದಿಗೆ ಭಾರತ ಕ್ಲೀನ್ಸ್ವೀಪ್ ಮಾಡಿತು.
ಸಮೀರ್ 21-6 21-11ರಿಂದ ಗಿಜ್ ಡ್ಯೂಜ್ ವಿರುದ್ಧ ಮೇಲುಗೈ ಪಡೆದರು.
ಭಾರತದ ಪುರುಷರ ತಂಡವು ಮುಂದಿನ ಪಂದ್ಯದಲ್ಲಿ ತನಗಿಂತ ದುರ್ಬಲ ಎನಿಸಿರುವ ತಾಹಿತಿ ಎದುರು ಆಡಲಿದೆ. ಮಂಗಳವಾರ ಈ ಪಂದ್ಯ ನಿಗದಿಯಾಗಿದೆ. ಮಹಿಳಾ ತಂಡವು ’ಬಿ’ ಗುಂಪಿನಲ್ಲಿ ಸ್ಕಾಟ್ಲೆಂಡ್ ಎದುರು ಕಣಕ್ಕಿಳಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.