ADVERTISEMENT

ಎಫ್‌ಐಎಚ್‌ ಪ್ರೊ ಲೀಗ್: ಮುಂದುವರಿದ ಭಾರತದ ದುಮ್ಮಾನ

ಪಿಟಿಐ
Published 24 ಫೆಬ್ರುವರಿ 2026, 14:11 IST
Last Updated 24 ಫೆಬ್ರುವರಿ 2026, 14:11 IST
<div class="paragraphs"><p>ಹಾಕಿ</p></div>

ಹಾಕಿ

   

ಹೋಬಾರ್ಟ್: ಈ ಬಾರಿಯ ಪ್ರೊ ಲೀಗ್ ಹಾಕಿ ಋತುವಿನಲ್ಲಿ ಭಾರತದ ನಿರಾಶಾದಾಯಕ ನಿರ್ವಹಣೆ ಎಗ್ಗಿಲ್ಲದೇ ಮುಂದುವರಿದಿದೆ. ಸ್ಪೇನ್ ವಿರುದ್ಧ ಮಂಗಳವಾರ ನಡೆದ ಹೋರಾಟದ ಪಂದ್ಯವನ್ನು ನಿಗದಿ ಅವಧಿಯಲ್ಲಿ 1–1 ಡ್ರಾ ಮಾಡಿಕೊಂಡರೂ, ಪೆನಾಲ್ಟಿ ಶೂಟೌಟ್‌ನಲ್ಲಿ 3–4 ರಿಂದ ಸೋಲನುಭವಿಸಿತು.

ಭಾರತ ಪಂದ್ಯದ ಕೊನೆಯ ಕ್ಷಣದವರೆಗೆ 1–0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 19ನೇ ನಿಮಿಷ ಮಣಿಂದರ್ ಅವರು ನಾಯಕ ಹಾರ್ದಿಕ್ ಸಿಂಗ್ ಒದಗಿಸಿದ ಪಾಸ್‌ನಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಆದರೆ 59ನೇ ನಿಮಿಷ ಬ್ರೂನೊ ಫಾಂಟ್‌ ಗೋಲು ಹೊಡೆದು ಸಮಬಲ ಸಾಧಿಸಿದ್ದರಿಂದ ಫಲಿತಾಂಶ ನಿರ್ಧಾರಕ್ಕೆ ಶೂಟೌಟ್‌ ಅನಿವಾರ್ಯವಾಯಿತು.

ADVERTISEMENT

ಆದರೆ ಶೂಟೌಟ್‌ನಲ್ಲಿ ಅಭಿಷೇಕ್ ಮತ್ತು ಹಾರ್ದಿಕ್ ಸಿಂಗ್ ಅವರು ಗುರಿತಪ್ಪಿದ್ದು ಭಾರತದಕ್ಕ ದುಬಾರಿಯಾಯಿತು. ಹೀಗಾಗಿ ಉತ್ತಮ ಹೋರಾಟದ ಪಂದ್ಯದಿಂದ ಒಂದು ಪಾಯಿಂಟ್‌ಗೆ ಸೀಮಿತಗೊಳ್ಳುವಂತಾಯಿತು.

ಭಾರತ ತಂಡವು ಬುಧವಾರ ನಡೆಯುವ ಮರು ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಏಳು ಪಂದ್ಯಗಳಿಂದ ಕೇವಲ ಎರಡು ಅಂಕಗಳನ್ನು ಗಳಿಸಿರುವ ಭಾರತ ತಂಡ ಒಂಬತ್ತು ತಂಡಗಳ ಲೀಗ್‌ನಲ್ಲಿ ಸದ್ಯ ಎಂಟನೇ ಸ್ಥಾನದಲ್ಲಿದೆ.

ಉತ್ತಮ ಹೋರಾಟ:

ನಿಗದಿ ಅವಧಿಯ ಆಟದ ಆರಂಭದಲ್ಲಿ ಸ್ಪೇನ್ ಚೆಂಡಿನ ಮೇಲೆ ನಿಯಂತ್ರಣ ಪಡೆಯಲು ಆದ್ಯತೆ ನೀಡಿತು. ನಿಧಾನವಾಗಿ ಕುದುರಿಕೊಂಡ ಭಾರತದ ಆಟಗಾರರೂ ಪ್ರತಿದಾಳಿ ನಡೆಸಿದರು. 14ನೇ ನಿಮಿಷ ಅಮಿತ್ ರೋಹಿದಾಸ್ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಹೊಡೆದ ಚೆಂಡನ್ನು ಸ್ಪೇನ್‌ನ ಗೋಲ್‌ಕೀಪರ್ ಲೂಯಿಸ್‌ ಕಾಲ್ಝಾದೊ ತಡೆದರು. ಇದಾಗಿ ಐದು ನಿಮಿಷಗಳ ನಂತರ ಭಾರತ ಮುನ್ನಡೆ ಪಡೆಯಿತು. ಸ್ಪೇನ್‌ ರಕ್ಷಣೆ ಆಟಗಾರನನ್ನು ತಪ್ಪಿಸಿ ಮುನ್ನಡೆದ ನಾಯಕ ಹಾರ್ದಿಕ್ ಸಿಂಗ್ ಚೆಂಡನ್ನು ಮಣಿಂದರ್ ಅವರಿಗೆ ತಲುಪಿಸಿದರು. ಮಣಿಂದರ್ ಈ ಯತ್ನದಲ್ಲಿ ಎಡವಲಿಲ್ಲ.

ಈ ಹಿನ್ನಡೆಯಿಂದ ಎಚ್ಚೆತ್ತ ಸ್ಪೇನ್ ತಕ್ಷಣವೇ ಪೆನಾಲ್ಟಿ ಕಾರ್ನರ್ ಗಿಟ್ಟಿಸಿದರೂ, ಪೆಪೆ ಕುನಿಲ್ ಅವರ ಹೊಡೆತವನ್ನು ಸೂರಜ್ ಕರ್ಕೇರಾ ಯಶಸ್ವಿಯಾಗಿ ತಡೆದರು. ಮತ್ತೊಂದು ಯತ್ನದಲ್ಲಿ ಕರ್ಕೇರಾ ಅವರು ಬಾಸ್ಟೆರಾ ಅವರ ಯತ್ನಕ್ಕೂ ತಡೆಗೋಡೆಯಾದರು. ಹೀಗಾಗಿ ವಿರಾಮದ ವೇಳೆಗೆ ಭಾರತ ತಂಡದ ಮುನ್ನಡೆ ಅಬಾಧಿತವಾಗಿ ಉಳಿಯಿತು.

ಮೂರನೇ ಕ್ವಾರ್ಟರ್‌ನಲ್ಲೂ ಸ್ಪೇನ್ ಗೋಲಿಗಾಗಿ ಸತತವಾಗಿ ಯತ್ನ ನಡೆಸಿದರೂ ಭಾರತ ಒತ್ತಡವನ್ನು ಯಶಸ್ವಿಯಾಗಿ ತಾಳಿಕೊಂಡಿತು. ಈ ಬಾರಿ ಗೋಲ್‌ಕೀಪರ್ ಸ್ಥಾನ ವಹಿಸಿದ್ದ ಮೋಹಿತ್ ಪೆನಾಲ್ಟಿ ಕಾರ್ನರ್ ಯತ್ನಗಳಲ್ಲಿ ಚೆಂಡನ್ನು ಅಮೋಘವಾಗಿ ತಡೆದರು.

44ನೇ ನಿಮಿಷ ಭಾರತಕ್ಕೆ ಮುನ್ನಡೆ ಹೆಚ್ಚಿಸುವ ಸುವರ್ಣಾವಕಾಶ ದೊರತಕಿತ್ತು. ಗ್ರೀನ್ ಕಾರ್ಡ್ ದರ್ಶನವಾಗಿ ಫಾರ್ಟುನೊ ಅವರು ಹೊರನಡೆದ ಕಾರಣ ಸ್ಪೇನ್ ತಂಡವು 10 ಆಟಗಾರರಿಗೆ ಸೀಮಿತಗೊಂಡಿತ್ತು. ಆದರೆ ಈ ವೇಳೆ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜುಗರಾಜ್ ಕರಾರುವಾಕ್ ಆಗಿ ಹೊಡೆದ ಚೆಂಡನ್ನು ಕಾಲ್ಝಾದೊ ಕೊನೆಕ್ಷಣದಲ್ಲಿ ತಡೆದರು.

ಭಾರತ ಒತ್ತಡ ನಿಭಾಯಿಸಿಕೊಂಡು ಪಂದ್ಯ ಗೆಲ್ಲುವಂತೆ ಕಂಡರೂ ಸ್ಪೇನ್ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿತು. 59ನೇ ನಿಮಿಷ ಯಶಸ್ಸೂ ಪಡೆಯಿತು. ರಕ್ಷಣಾ ಲೋಪದ ಲಾಭ ಪಡೆದ ಫಾಂಟ್‌ ಅಮೋಘವಾಗಿ ಗೋಲು ಗಳಿಸಿ ಸ್ಕೋರ್ ಸಮ ಮಾಡಿದರು. ಕೊನೆಯ 13 ನಿಮಿಷಗಳಲ್ಲಿ ಸ್ಪೇನ್ ಸತತವಾಗಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ಆದರೆ ಭಾರತದ ರಕ್ಷಣಾ ವಿಭಾಗ ಇನ್ನಷ್ಟು ಗೋಲುಬಿಟ್ಟುಕೊಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.