ದುಬೈ: ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಮತ್ತು ಎಚ್.ಎಸ್. ಪ್ರಣಯ್ ನೇತೃತ್ವದ ಭಾರತ ತಂಡವು ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮೊದಲ ಪಂದ್ಯದಲ್ಲಿ ಕಜಕಸ್ತಾನ ಸವಾಲು ಎದುರಿಸಲಿದೆ.
ಮಂಗಳವಾರದಿಂದ ಇಲ್ಲಿ ನಡೆಯಲಿರುವ ಚಾಂಪಿಯನ್ಷಿಪ್ನ ಬಿ ಗುಂಪಿನ ಪಂದ್ಯದಲ್ಲಿ ಭಾರತ ಜಯ ಗಳಿಸುವ ನೆಚ್ಚಿನ ತಂಡ ಎನಿಸಿದೆ.
ಕಳೆದ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸಿಂಧು ಗಾಯದ ಕಾರಣ ವಿಶ್ವಚಾಂಪಿಯನ್ಷಿಪ್ನಲ್ಲಿ ಆಡಿರಲಿಲ್ಲ. ಜನವರಿಯಲ್ಲಿ ಮಲೇಷ್ಯಾ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು.
ಮಹಿಳೆಯರ ಸಿಂಗಲ್ಸ್ನಲ್ಲಿ ಸಿಂಧು ಜೊತೆಗೆ ಆಕರ್ಷಿ ಕಶ್ಯಪ್ ಇದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಪ್ರಣಯ್ ಅವರೊಂದಿಗೆ ಲಕ್ಷ್ಯ ಸೇನ್ ಆಡಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ– ಧ್ರುವ ಕಪಿಲ, ಕೃಷ್ಣಪ್ರಸಾದ್ ಗರಗ– ವಿಷ್ಣುವರ್ಧನ್ ಗೌಡ್ ಪಿ., ಮಹಿಳಾ ಡಬಲ್ಸ್ನಲ್ಲಿ ತ್ರಿಶಾ ಜೋಲಿ–ಗಾಯತ್ರಿ ಗೋಪಿಚಂದ್, ಅಶ್ವಿ ಭಟ್– ಶಿಖಾ ಗೌತಮ್, ಮಿಶ್ರ ಡಬಲ್ಸ್ನಲ್ಲಿ ಇಶಾನ್ ಭಟ್ನಾಗರ್– ತನಿಶಾ ಕ್ರಾಸ್ತೊ ಕಣಕ್ಕಿಳಿಯುವರು.
ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್ಫೈನಲ್ ಪ್ರವೇಶಿಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.