ಟೋಕಿಯೊ: ತಂಡ ವಿಭಾಗದಲ್ಲಿ ಸಾಲು ಸಾಲು ಸೋಲು ಅನುಭವಿಸಿರುವ ಭಾರತದ ಆರ್ಚರಿ ಪಟುಗಳಿಗೆ ಪದಕ ಜಯದ ಕೊನೆಯ ಅವಕಾಶ ಬುಧವಾರ ಲಭಿಸಲಿದೆ.
ಇಲ್ಲಿ ನಡೆಯಲಿರುವ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಆರ್ಚರಿ ‘ತಾರೆ‘ಯರು ತಮ್ಮ ಸಾಮರ್ಥ್ಯ ಪಣಕ್ಕೊಡ್ಡಲಿದ್ಧಾರೆ.
ಪುರುಷರ ತಂಡ ವಿಭಾಗದಲ್ಲಿ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣದೀಪ್ ರಾಯ್ ಅವರ ಬಳಗವು ಕೊರಿಯಾ ತಂಡದ ವಿರುದ್ಧ ಕ್ವಾರ್ಟರ್ಫೈನಲ್ನಲ್ಲಿ ಸೋತಿತು. ಮಿಶ್ರ ಪೇರ್ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆರ್ಚರಿಪಟು ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ನಿರಾಶೆ ಅನುಭವಿಸಿದ್ದರು.
ವೈಯಕ್ತಿ ವಿಭಾಗದಲ್ಲಿ ಪದಕ ಜಯಿಸಬೇಕಾದರೆ ಅಗಾಧ ಪೈಪೋಟಿಯನ್ನು ಮೆಟ್ಟಿ ನಿಲ್ಲಬೇಕಾದ ಒತ್ತಡ ಈಗ ಆರ್ಚರಿ ಪಟುಗಳ ಮೇಲೆ ಇದೆ. ಒಲಿಂಪಿಕ್ಸ್ನಲ್ಲಿ ಮೂರನೇ ಬಾರಿ ಸ್ಪರ್ಧಿಸುತ್ತಿರುವ ದೀಪಿಕಾ ಕುಮಾರಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ. ಅವರು ಮೊದಲ ಸುತ್ತಿನಲ್ಲಿ ಭೂತಾನ್ನ193ನೇ ಶ್ರೇಯಾಂಕದ ಕರ್ಮಾ ಅವರನ್ನು ಎದುರಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಅತನು ದಾಸ್ ಅವರಿಗೆ ತೈಪೆಯ ಡ್ಯಾಂಗ್ ಯು ಚೆಂಗ್ ಸವಾಲೊಡ್ಡಲಿದ್ದಾರೆ. ಅನುಭವಿ ತರುಣ್ದೀಪ್ ರಾಯ್ ಉಕ್ರೇನ್ನ ಒಲೆಕ್ಸಿ ಹನ್ಬಿನ್ ವಿರುದ್ಧ ಕಣಕ್ಕಿಳಿಯುವರು. ಪ್ರವೀಣ್ ಜಾಧವ್ ಸತ್ವಪರಿಕ್ಷೆ ಆಗಲಿದೆ. ಅವರು ದ್ವಿತೀಯ ಶ್ರೇಯಾಂಕದ, ರಷ್ಯಾದ ಗಾಲ್ಸನ್ ಬಜ್ರಾಜ್ಪೊವ್ ಎದುರು ಸ್ಪರ್ಧಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.