ಬೆಂಗಳೂರು: ಈಶ ಫೌಂಡೇಷನ್ನ ಸಾಮಾಜಿಕ ಅಭಿವೃದ್ಧಿ ಅಂಗವಾದ ಈಶಾ ಔಟ್ರೀಚ್ ಆಶ್ರಯಲ್ಲಿ ನಡೆಯುವ ‘ಈಶ ಗ್ರಾಮೋತ್ಸವ’ದ ಅಂತಿಮ ಹಂತದ ಸ್ಪರ್ಧೆಗೆ ಇದೇ 23ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆವರಣದಲ್ಲಿ ನಡೆಯಲಿದೆ.
ಗ್ರಾಮೋತ್ಸವದ 15ನೇ ಆವೃತ್ತಿಯು 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟಗಳಲ್ಲಿ ನಡೆಸಲಾಗಿದೆ. ದಕ್ಷಿಣ ಭಾರತದ ಐದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಿಂದ (ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ) 60 ಸಾವಿರಕ್ಕೂ ಹೆಚ್ಚು ಆಟಗಾರರ ಭಾಗವಹಿಸಿದ್ದಾರೆ. ಫೈನಲ್ ಸ್ಪರ್ಧೆಗಳು 112 ಅಡಿ ಎತ್ತರದ ಆದಿಯೋಗಿ ಮೂರ್ತಿಯ ಎದುರಿನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗಿಯಾಗಲಿದ್ದಾರೆ.
2004ರಿಂದ ಈಶ ಗ್ರಾಮೋತ್ಸವ ಆಯೋಜಿಸಲಾಗುತ್ತಿದೆ. ಈ ವರ್ಷ ಗ್ರಾಮೋತ್ಸವದ ವಿವಿಧ ಸ್ಪರ್ಧೆಗಳಿಗೆ ಒಟ್ಟು ₹ 55 ಲಕ್ಷ ಬಹುಮಾನ ನೀಡಲಾಗುವುದು. ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಸ್ಪರ್ಧೆಯ ವಿಜೇತರು ಕ್ರಮವಾಗಿ ₹ 5 ಲಕ್ಷ ಮತ್ತು ₹ 2 ಲಕ್ಷ ಹಾಗೂ ಪುರುಷ ಮತ್ತು ಮಹಿಳಾ ಕಬಡ್ಡಿಯಲ್ಲಿ ವಿಜೇತರಾದ ತಂಡಗಳು ಕ್ರಮವಾಗಿ ₹ 5 ಲಕ್ಷ ಮತ್ತು ₹ 2 ಲಕ್ಷ ಬಹುಮಾನ ಪಡೆಯಲಿದ್ದಾರೆ.
‘ಈಶ ಗ್ರಾಮೋತ್ಸವ, ಇದು ವೃತ್ತಿಪರ ಆಟಗಾರರ ಪಂದ್ಯವಲ್ಲ. ಆದರೆ, ಪ್ರತಿಯೊಬ್ಬರನ್ನು ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಗ್ರಾಮೀಣ ಆಟಗಳ ಮೋಜನ್ನು ಪುನರುಜ್ಜೀವನಗೊಳಿಸುವುದು ಮತ್ತು ನಶಿಸುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಗ್ರಾಮೋತ್ಸವದ ಸಂಘಟನಾ ತಂಡದ ಸ್ವಾಮಿ ನಕುಜ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.