ADVERTISEMENT

ಕಬಡ್ಡಿ ಸಂಸ್ಥೆ ಚುನಾವಣೆ: ಸ್ಪರ್ಧಿಗಳ ಭವಿಷ್ಯ ಲಕೋಟೆಯಲ್ಲಿ ಬಂದ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 14:43 IST
Last Updated 7 ಡಿಸೆಂಬರ್ 2021, 14:43 IST

ಬೆಂಗಳೂರು: ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆಯು ಕಂಠೀರವ ಕ್ರೀಡಾಂಗಣದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಆದರೆ ಹೈಕೋರ್ಟ್‌ ಸೂಚನೆಯ ಮೇರೆಗೆ ಆರು ಸದಸ್ಯ ಸಂಸ್ಥೆಗಳ ಮತಗಳನ್ನು ಲಕೋಟೆಯಲ್ಲಿ ಭದ್ರಪಡಿಸಲಾಗಿದ್ದು, ಫಲಿತಾಂಶವನ್ನು ತಡೆಹಿಡಿಯಲಾಗಿದೆ.

‘2018ರಲ್ಲಿ ಸಂಸ್ಥೆಯ ಚುನಾವಣೆ ನಡೆಸಲು ಉದ್ದೇಶಿಸಿದಾಗ ತಮಗೂ ಮತದಾನದ ಹಕ್ಕು ನೀಡಬೇಕೆಂದು ಹಾವೇರಿ, ಕೊಪ್ಪಳ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಸ್ಥೆಗಳ‌ ಕೋರಿದ್ದವು. ಈ ಘಟಕಗಳಿಗೆ ಮತದಾನದ ಹಕ್ಕು ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ಮತಗಳನ್ನು ಲಕೋಟೆಯಲ್ಲಿ ಹಾಕಲು ತಿಳಿಸಿತ್ತು. ‌ಈ ಮತಗಳು‌ ಲಕೋಟೆಯಲ್ಲಿ ಇರುವುದರಿಂದ ಎಣಿಕೆ ಪ್ರಕ್ರಿಯೆ ಆಗಲಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

‘ಒಟ್ಟು 56 ಮತಗಳು ಚಲಾವಣೆಯಾಗಿದ್ದು, ವಿವಿಧ ಹುದ್ದೆಗಳಿಗೆ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಸಾದ್ ಬಾಬು, ಹನುಮಂತೇಗೌಡ, ಕಾರ್ಯದರ್ಶಿ ಸ್ಥಾನಕ್ಕೆ ಮುನಿರಾಜು, ಪಿಳ್ಳಪ್ಪ, ಖಜಾಂಚಿ ಸ್ಥಾನಕ್ಕೆ ನಂದಕುಮಾರ್ ಪಾಟೀಲ, ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ವಿ.ಜಯರಾಂ, ಬಿ.ಸಿ.ಸುರೇಶ್ ಸ್ಪರ್ಧಿಸಿದ್ದಾರೆ. ಚೇರಮನ್ ಆಗಿ ರಾಕೇಶ್ ಮಲಿಕ್ ಈಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.