ಅಥಣಿ: ಇಲ್ಲಿನ ಜಾಧವಜಿ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಅಂಗವಾಗಿ ಪಟ್ಟಣದಲ್ಲಿ ಫೆ.12ರಿಂದ 14ರವರೆಗೆ ಪುರುಷರ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನಾ ಸಮಿತಿ ಅಧ್ಯಕ್ಷ ಆರ್.ಬಿ. ದೇಶಪಾಂಡೆ, ‘ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ’ಎಂದು ಮಾಹಿತಿ ನೀಡಿದರು.
ರಾಜ್ಯ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಸಿ.ಎಸ್. ಬರಗಾಲಿ ಮಾತನಾಡಿ, ‘ಜನರು ಪಂದ್ಯಗಳನ್ನು ವೀಕ್ಷಿಸಲು 5ರಿಂದ 8 ಸಾವಿರ ಆಸನಗಳು, ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ಉದ್ಘಾಟನೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ. ರಮೇಶ ಅವರನ್ನು ಆಮಂತ್ರಿಸಲಾಗುವುದು. 30 ಮಂದಿ ನಿರ್ಣಾಯಕರು ಭಾಗವಹಿಸಲಿದ್ದಾರೆ. ಬೆಂಗಳೂರಿನ 5, ಮಹಾರಾಷ್ಟ್ರದ 5, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಕೇರಳ ರಾಜ್ಯದ ಒಂದೊಂದು ತಂಡಗಳು ಹೆಸರು ನೋಂದಾಯಿಸಿವೆ. ಆಟಗಾರರು, ನಿರ್ಣಾಯಕರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಜೆ.ಇ. ಸಂಸ್ಥೆ ಮಾಡಲಿದೆ’ ಎಂದು ತಿಳಿಸಿದರು.
ಶತಮಾನೋತ್ಸವ ಸಮಿತಿ ಸಂಯೋಜಕ ಪಿ.ಪಿ. ಮಿರಜ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟಿ, ಮುಖಂಡರಾದ ಸಂಜೀವ ಕುಲಕರ್ಣಿ, ಗುಂಡು ಖವಟಕೊಪ್ಪ, ಬಾಳೇಶ ಬಮ್ಮನಾಳೆ, ಆರ್.ಎ. ಜೋಶಿ, ಆರ್.ಎ. ನಾಯಿಕ, ಸತೀಶ ಅಪರಾಜ, ಬಿ.ಬಿ. ಮಂಟೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.