ADVERTISEMENT

ಥಾಮಸ್ ಕಪ್ ವಿಜೇತ ಲಕ್ಷ್ಮ ಸೇನ್‌ಗೆ ₹5 ಲಕ್ಷ ಬಹುಮಾನ ಘೋಷಿಸಿದ ಸಿಎಂ ಬೊಮ್ಮಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 1:17 IST
Last Updated 17 ಮೇ 2022, 1:17 IST
 ಲಕ್ಷ್ಮ ಸೇನ್‌
ಲಕ್ಷ್ಮ ಸೇನ್‌    

ಬೆಂಗಳೂರು: ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ತಂಡದ ಲಕ್ಷ್ಮ ಸೇನ್‌ ಅವರಿಗೆ ಸರ್ಕಾರದ ವತಿಯಿಂದ ₹5 ಲಕ್ಷ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮಿನಿ ಒಲಿಂಪಿಕ್ ಕ್ರೀಡಾಕೂಟ-2022’ ಉದ್ಘಾಟಿಸಿ ಅವರು ಮಾತನಾಡಿದರು.

‘ಗೆಲುವಿಗಾಗಿ ಆಡಬೇಕು, ಸೋಲಬಾರದು ಎಂದು ಆಡಿದರೆ ಯಶಸ್ಸು ಸಿಗುವುದಿಲ್ಲ. ಆದ್ದರಿಂದ ನಾವು ಯಾವಾಗಲೂ ಸಕಾರಾತ್ಮಕ ಮನೋಭಾವದಿಂದ ಆಡಬೇಕು. ನಮ್ಮ ಸರ್ಕಾರ ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದೆ. ನಾವು ವಿಶೇಷ ತರಬೇತಿಗಾಗಿ ವಿವಿಧ ವಿಭಾಗಗಳ 75 ಕ್ರೀಡಾಪಟುಗಳ ಗುಂಪನ್ನು ಆಯ್ಕೆ ಮಾಡಿದ್ದೇವೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲಾಗಿದೆ’ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ADVERTISEMENT

ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಭಾರತ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಬ್ಯಾಡ್ಮಿಂಟನ್ ತಂಡವು ಭಾನುವಾರ ಮೊದಲ ಬಾರಿಗೆ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಹದಿನಾಲ್ಕು ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಅಮೋಘ ಆಟವಾಡಿದ ಭಾರತ ತಂಡ ಥಾಮಸ್ ಕಪ್ ಚಮೊದಲ ಬಾರಿ ಚಿನ್ನದ ಪದಕ ಗಳಿಸಿತು.

ಇತ್ತೀಚೆಗೆ ನಡೆದ ಫೈನಲ್ ಪಂದ್ಯದಲ್ಲಿ ಸಂಪೂರ್ಣ ಆಧಿಪತ್ಯ ಮೆರೆದ ಭಾರತ 3–0 ಅಂತರದಿಂದ ಜಯ ಗಳಿಸಿತ್ತು.

ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಮ ಸೇನ್ 8–21, 21–17, 21–16ರಲ್ಲಿ ಆ್ಯಂಟನಿ ಸಿನಿಸುಕ ಜಿಂಟಿಂಗ್ ವಿರುದ್ಧ ಜಯ ಗಳಿಸಿ ಮುನ್ನಡೆ ತಂದುಕೊಟ್ಟರು. ನಂತರ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ್ ಸುಖಮುಲ್ಜೊ ಜೋಡಿಯನ್ನು 18–21, 23–21, 21–19ರಲ್ಲಿ ಮಣಿಸಿದರು. ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಭರ್ಜರಿ ಆಟವಾಡಿ 21–15, 23–21ರಲ್ಲಿ ಗೆದ್ದರು. ಹೀಗಾಗಿ ಉಳಿದೆರಡು ಪಂದ್ಯಗಳನ್ನು ಆಡುವ ಅಗತ್ಯ ಬೀಳಲಿಲ್ಲ.

ಭಾರತ ಈ ಹಿಂದೆ 13 ಬಾರಿ ಥಾಮಸ್ ಕಪ್ ಟೂರ್ನಿಯಲ್ಲಿ ಆಡಿತ್ತು. 1979ರಲ್ಲಿ ಇಂಡೊನೇಷ್ಯಾದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಗರಿಷ್ಠ ಸಾಧನೆಯಾಗಿತ್ತು. ಆ ವರ್ಷ ನಾಲ್ಕರ ಘಟ್ಟದಲ್ಲಿ ಭಾರತ ತಂಡ ಡೆನ್ಮಾರ್ಕ್‌ಗೆ ಮಣಿದಿತ್ತು. ಈ ಬಾರಿ ಆರಂಭದಲ್ಲೇ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ತಂಡ ನಂತರ ಅಮೋಘ ಸಾಮರ್ಥ್ಯ ಪ್ರದರ್ಶಿಸಿತ್ತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ತಂಡ ಈ ಅವಕಾಶವನ್ನು ಚಿನ್ನದ ಸಾಧನೆಯನ್ನಾಗಿ ಪರವರ್ತಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.