ಬೆಂಗಳೂರು: ಆಯುಷ್ ಕೊಟ್ಟಾರಿ ಮತ್ತು ಅರವಿಂದ್ರನ್ ಎಸ್. ಅವರ ಆಟದ ಬಲದಿಂದ ಕರ್ನಾಟಕ ತಂಡವು ಎನ್ಎಫ್ಸಿ ಸಬ್ ಜೂನಿಯರ್ ಬಾಲಕರ (13 ವರ್ಷದೊಳಗಿನವರ) ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ನಲ್ಲಿ 5–3 ಗೋಲುಗಳಿಂದ ದೆಹಲಿ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ ಆತಿಥೇಯರು 2–1 ಗೋಲುಗಳ ಮುನ್ನಡೆ ಪಡೆದಿತ್ತು. ಉತ್ತರಾರ್ಧದಲ್ಲೂ ಕರ್ನಾಟಕದ ಬಾಲಕರು ಚುರುಕಿನ ಆಟವಾಡಿದರು.
ಕರ್ನಾಟಕದ ಪರ ಆಯುಷ್ (33ನೇ ಮತ್ತು 44ನೇ ನಿ.) ಮತ್ತು ಅರವಿಂದ್ರನ್ (58ನೇ ಮತ್ತು 73ನೇ) ತಲಾ ಎರಡು ಗೋಲಿನೊಂದಿಗೆ ಮಿಂಚಿದರೆ, ಸಿ.ಎಚ್.ಸಕೀಪ್ (65ನೇ ನಿ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಮ್ಯಾಕ್ಡೋನಿಶ್ ನ್ಗೈರಂಗಬಾಮ್ (80ನೇ ಮತ್ತು 84ನೇ ನಿ), ಹುತೊ ಮಿಲ್ಲೊ (34ನೇ) ದೆಹಲಿ ತಂಡಕ್ಕೆ ಗೋಲು ತಂದಿತ್ತರು.
ಟೂರ್ನಿಯಲ್ಲಿ ಒಟ್ಟು 14 ತಂಡಗಳು ಪಾಲ್ಗೊಂಡಿವೆ. ಎ ಮತ್ತು ಸಿ ಗುಂಪಿನ ಪಂದ್ಯಗಳು ಈಗಾಗಲೇ ಮುಕ್ತಾಯವಾಗಿ ಕರ್ನಾಟಕ ಫೈನಲ್ಗೇರಿದೆ. ಶನಿವಾರದಿಂದ ಬಿ ಮತ್ತು ಡಿ ಗುಂಪಿನ ಪಂದ್ಯಗಳು ಆರಂಭಗೊಳ್ಳಲಿವೆ. ಅವುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡ ಇದೇ 22ರಂದು ಕರ್ನಾಟಕವನ್ನು ಎದುರಿಸಲಿದೆ.
ಶನಿವಾರ ಬಿ ಗುಂಪಿನ ಪಂದ್ಯದಲ್ಲಿ ಮಣಿಪುರ ಮತ್ತು ಕೇರಳ; ಜಾರ್ಖಂಡ್ ಮತ್ತು ಗುಜರಾತ್; ಡಿ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ; ಮಹಾರಾಷ್ಟ್ರ ಮತ್ತು ಗೋವಾ ತಂಡಗಳು ಮುಖಾಮುಖಿಯಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.