
ನವದೆಹಲಿ: ಪಟಿಯಾಲದಲ್ಲಿರುವ ಪ್ರತಿಷ್ಠಿತವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ(ಎನ್ಎಸ್ಎನ್ಐಎಸ್) ಯನ್ನು ಕ್ರೀಡಾ ಆಡಳಿತಗಾರರಿಗೆ ತರಬೇತಿ ನೀಡುವ ಅಕಾಡೆಮಿಯನ್ನು ಪರಿವರ್ತಿಸುವ ಪ್ರಸ್ತಾವವನ್ನು ಅಭಿನವ್ ಬಿಂದ್ರಾ ನೇತೃತ್ವದ ಕಾರ್ಯಪಡೆಯು ತಳ್ಳಿಹಾಕಿದೆ. ಈ ಕಾರ್ಯಪಡೆಯನ್ನು ಕೇಂದ್ರ ಕ್ರೀಡಾ ಸಚಿವಾಲಯವು ಈಚೆಗೆ ನೇಮಕ ಮಾಡಿತ್ತು.
‘ಈ ಯೋಜನೆಯು ಸೀಮಿತ ಮತ್ತು ಅಸಮರ್ಥನೀಯ’ ಎಂದು ಕಾರ್ಯಪಡೆಯು ಹೇಳಿದೆ. ಭಾರತದ ಕ್ರೀಡಾ ಆಡಳಿತದಲ್ಲಿರುವ ಲೋಪಗಳನ್ನು ಗುರುತಿಸಿ ಸುಧಾರಣೆಗಳನ್ನು ಸೂಚಿಸಲು ಈ ಪಡೆಯನ್ನು ಸರ್ಕಾರವು ರಚಿಸಿದೆ.
‘ಎನ್ಎಸ್ಎನ್ಎಸ್ಐ ಅತ್ಯುತ್ಕೃಷ್ಟ ಮತ್ತು ಖ್ಯಾತಿವೆತ್ತ ಸಂಸ್ಥೆಯಾಗಿದೆ. ಇಲ್ಲಿ ಕ್ರೀಡಾ ತರಬೇತಿ ಪಡೆಯುವುದು ಗೌರವದ ಸಂಕೇತವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾರ್ವಜನಿ ಸಂಸ್ಥೆಗಳು ಉದ್ಯೋಗ ನೀಡಿಕೆಯಲ್ಲಿ ಈ ಸಂಸ್ಥೆಯಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡುತ್ತವೆ. ಎನ್ಐಎಸ್ ತರಬೇತುದಾರರಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಒಂಬತ್ತು ಸದಸ್ಯರು ಇರುವ ಕಾರ್ಯಪಡೆಯು ವರದಿಯಲ್ಲಿ ಉಲ್ಲೇಖಿಸಿದೆ.
ಆಡಳಿತದಲ್ಲಿ ಇನ್ನೂ ಕೆಲವು ಸುಧಾರಣೆಗಳನ್ನು ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಸ್ವೀಕರಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸೂಕ್ ಮಾಂಡವಿಯಾ, ‘ಎನ್ಐಎಸ್ನಲ್ಲಿ ಕೋರ್ಸ್ಗಳ ಸ್ವರೂಪವನ್ನು ಬದಲಿಸಿ ಉತ್ತಮ ದರ್ಜೆಗೇರಿಸುವುದನ್ನು ಪರಿಗಣಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.