ಹಾಕಿ
ಜಲಂಧರ್: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಜೂನಿಯರ್ ಪುರುಷರ ಚಾಂಪಿಯನ್ಷಿಪ್ ಟೂರ್ನಿಯ ‘ಎ’ ಡಿವಿಷನ್ ಪಂದ್ಯದಲ್ಲಿ ಭಾನುವಾರ 2–3ರಿಂದ ಒಡಿಶಾ ಎದುರು ಪರಾಭವಗೊಂಡಿತು.
ನಿತೇಶ್ ಶರ್ಮಾ ಅವರು ಪಂದ್ಯದ 37ನೇ ನಿಮಿಷದಲ್ಲಿ ಗೋಲು ಗಳಿಸಿ ಕರ್ನಾಟಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದರು. ಆದರೆ, ಅಂತಿಮ ಕ್ವಾರ್ಟರ್ನಲ್ಲಿ ಒಡಿಶಾದ ರಿತೀಕ್ ಲಾಕ್ರಾ (50ನೇ ನಿ.) ಹಾಗೂ ಆರ್ಯನ್ ಕ್ಸೆಸ್ (51ನೇ ನಿ.) ಗೋಲು ಗಳಿಸಿ ಪಂದ್ಯದ ಗತಿ ಬದಲಿಸಿದರು. ಅದರೊಂದಿಗೆ ಒಡಿಶಾ ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಎ ಡಿವಿಷನ್ನ ಇತರ ಪಂದ್ಯಗಳಲ್ಲಿ ಹರಿಯಾಣ ತಂಡವು 5–0ಯಿಂದ ಮಣಿಪುರ ವಿರುದ್ಧ; ಉತ್ತರ ಪ್ರದೇಶ ತಂಡವು 2–0ಯಿಂದ ಜಾರ್ಖಂಡ್ ವಿರುದ್ಧ ಹಾಗೂ ಪಂಜಾಬ್ ತಂಡವು 3–2ರಿಂದ ಮಧ್ಯಪ್ರದೇಶ ವಿರುದ್ಧ ಗೆಲುವು ಸಾಧಿಸಿದವು.
‘ಬಿ’ ಡಿವಿಷನ್ನ ಎ ಮತ್ತು ಬಿ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಚಂಡೀಗಢ ಹಾಗೂ ದೆಹಲಿ ತಂಡಗಳು ಮುಂದಿನ ವರ್ಷದ ಟೂರ್ನಿಗೆ ‘ಎ’ ಡಿವಿಷನ್ನಲ್ಲಿ ಆಡುವ ಅರ್ಹತೆ ಪಡೆದುಕೊಂಡವು. ಕಳಪೆ ಪ್ರದರ್ಶನ ತೋರಿದ ಹಿಮಾಚಲ ಪ್ರದೇಶ ಹಾಗೂ ಅಸ್ಸಾಂ ತಂಡಗಳು ‘ಸಿ’ ಡಿವಿಷನ್ಗೆ ಹಿಂಬಡ್ತಿ ಪಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.