ಭುವನೇಶ್ವರ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ ಭಾರತ ಹಾಕಿ ತಂಡದಲ್ಲಿ ಆಡಿದ್ದ ವಿವೇಕ್ ಸಾಗರ್ ಪ್ರಸಾದ್ ಅವರನ್ನು ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಭುವನೇಶ್ವರದಲ್ಲಿ ಇದೇ 24ರಿಂದ ಟೂರ್ನಿ ನಡೆಯಲಿದೆ. 16 ತಂಡಗಳು ಕಣದಲ್ಲಿವೆ. ಭಾರತ ತಂಡವು ಮೊದಲ ಪಂದ್ಯದಲ್ಲಿ ಫ್ರಾನ್ಸ್ ಎದುರು ಆಡಲಿದೆ.
21 ವರ್ಷದ ವಿವೇಕ್ ಮಧ್ಯಪ್ರದೇಶದ ಇಟಾರ್ಸಿಯವರು. 2018ರ ಯೂತ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ತಂಡದ ಡಿಫೆಂಡರ್ ಸಂಜಯ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಒಟ್ಟು 18 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. 2016ರಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸಿತ್ತು.
‘ಉತ್ತಮ ಸಮತೋಲನ ಇರುವ ತಂಡ ಇದಾಗಿದೆ. ದೊಡ್ಡ ಟೂರ್ನಿಯಲ್ಲಿ ಆಡುವ ಅವಕಾಶ ಜೂನಿಯರ್ ಪ್ರತಿಭೆಗಳಿಗೆ ಲಭಿಸುತ್ತಿದೆ. ಇದು ದೇಶದ ಹಾಕಿ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಮ್ ರೀಡ್ ಹೇಳಿದ್ದಾರೆ.
ತಂಡ: ವಿವೇಕ್ ಸಾಗರ್ ಪ್ರಸಾದ್ (ನಾಯಕ), ಸಂಜಯ್ (ಉಪನಾಯಕ), ಶ್ರದ್ಧಾನಂದ ತಿವಾರಿ, ಪ್ರಶಾಂತ್ ಚೌಹಾಣ್ (ಗೋಲ್ಕೀಪರ್), ಸುದೀಪ್ ಚಿರ್ಮಾಕೊ, ರಾಹುಲ್ ಕುಮಾರ್ ರಾಜಭಾರ್, ಮಣಿಂದರ್ ಸಿಂಗ್, ಪವನ್ (ಗೋಲ್ಕೀಪರ್), ವಿಷ್ಣುಕಾಂತ್ ಸಿಂಗ್, ಅಂಕಿತ್ ಪಾಲ್, ಉತ್ತಮ ಸಿಂಗ್, ಸುನೀಲ್ ಜೊಜೊ, ಮಂಜೀತ್, ರವಿಚಂದ್ರ ಸಿಂಗ್ ಮೊರಂಗತಾಮ್, ಆಭಿಷೇಕ್ ಲಕ್ರಾ, ಯಶದೀಪ್ ಸಿವಾಚ್, ಗುರಮುಖ್ ಸಿಂಗ್, ಅರೈಜೀತ್ ಸಿಂಗ್ ಹುಂದಾಲ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.