ADVERTISEMENT

ಗೆಲುವನ್ನು ಆಚರಿಸಿ, ಕ್ಷಮೆ ಕೇಳಬೇಡಿ: ಪೂಜಾ ಗೆಹಲೋತ್‌ಗೆ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 13:41 IST
Last Updated 7 ಆಗಸ್ಟ್ 2022, 13:41 IST
ಪ್ರಧಾನಿ ನರೇಂದ್ರ ಮೋದಿ ಹಾಗೂ ಪೂಜಾ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಹಾಗೂ ಪೂಜಾ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ‘ನೀವು ಪದಕ ಗೆದ್ದಿರುವುದಕ್ಕೆ ಸಂಭ್ರಮಾಚರಿಸಿ, ಕ್ಷಮೆ ಕೇಳಬೇಡಿ’ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಪೂಜಾ ಗೆಹಲೋತ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯದ ಮಾತುಗಳನ್ನಾಡಿದ್ದಾರೆ.

ಪೂಜಾ ಗೆಹಲೋತ್‌ ಅವರು ಮಹಿಳೆಯರ 50 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಮೂರನೇ ಸ್ಥಾನವನ್ನು ನಿರ್ಣಯಿಸಲು ಶನಿವಾರ ನಡೆದಿದ್ದ ಸ್ಪರ್ಧೆಯಲ್ಲಿ ಅವರು 12–2 ರಲ್ಲಿ ಕ್ರಿಸ್ಟೆಲ್‌ ಲೆಮೊಫಾಕ್‌ ವಿರುದ್ಧ ಜಯಿಸಿದ್ದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪೂಜಾ ಗೆಹಲೋತ್‌, ‘ದೇಶ ಬಾಂಧವರಲ್ಲಿ ಕ್ಷಮೆ ಕೋರುತ್ತೇನೆ. ಇಲ್ಲಿ ರಾಷ್ಟ್ರಗೀತೆ ಹಾಡುವಂತಾಗಬೇಕು ಎಂದು ನಾನು ಆಶಿಸಿದ್ದೆ. ನನ್ನ ತಪ್ಪುಗಳಿಂದ ನಾನು ಪಾಠ ಕಲಿಯಲಿದ್ದೇನೆ, ಆ ಬಗ್ಗೆ ಹೆಚ್ಚಿನ ಶ್ರಮ ವಹಿಸಲಿದ್ದೇನೆ’ ಎಂದು ಭಾವುಕರಾಗಿ ಹೇಳಿದ್ದರು.

ಈ ಕುರಿತು ‘ಎಎನ್‌ಐ’ ಸುದ್ದಿ ಸಂಸ್ಥೆ ವಿಡಿಯೊ ತುಣುಕಿನೊಂದಿಗೆ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೋದಿ, ‘ಪೂಜಾ, ನೀವು ಪದಕ ಗೆದ್ದಿರುವುದು ಸಂಭ್ರಮ ಆಚರಿಸಲು, ಕ್ಷಮೆ ಕೇಳುವುದಕ್ಕಲ್ಲ. ನಿಮ್ಮ ಜೀವನ ಗಾಥೆ ನಮಗೆಲ್ಲ ಸ್ಫೂರ್ತಿದಾಯಕ. ನಿಮ್ಮ ಯಶಸ್ಸು ನಮಗೆ ಸಂತಸ ತಂದಿದೆ. ಮುಂದೆ ಮಹತ್ತರವಾದದ್ದನ್ನು ಸಾಧಿಸಲಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.