ಬೆಂಗಳೂರು: ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಅಬ್ದುಲ್ ವಾಹಿದ್ ತನ್ವೀರ್, ಮೊರೊಕ್ಕೊದ ಎರ್ಫೌಡ್ನಲ್ಲಿ ನಡೆದ ಮೆರ್ಗೌಜಾ ಮೋಟಾರು ರ್ಯಾಲಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಶೆರ್ಕೊ ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರತಿನಿಧಿಸಿದ್ದ ಅಬ್ದುಲ್, ಎಂಡ್ಯುರೊ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಅಬ್ದುಲ್, ಉತ್ತಮ ಸಾಮರ್ಥ್ಯ ತೋರಿದರು. ಮರಳುಗಾಡಿನ ಇಳಿಜಾರಿಯಲ್ಲಿ ಅಮೋಘ ರೀತಿಯಲ್ಲಿ ಬೈಕ್ ಚಲಾಯಿಸಿದ ಅವರು ಮೊದಲಿಗರಾಗಿ ಗುರಿ ಮುಟ್ಟಿದರು.
ಕರ್ನಾಟಕದ ಮತ್ತೊಬ್ಬ ಚಾಲಕ ಕೆ.ಪಿ.ಅರವಿಂದ್, ರ್ಯಾಲಿ ವಿಭಾಗದಲ್ಲಿ ಒಟ್ಟಾರೆ 51ನೇ ಸ್ಥಾನ ಪಡೆದರು. ಐದನೇ ಹಂತದ ಸ್ಪರ್ಧೆಯನ್ನು ಉಡುಪಿಯ ಅರವಿಂದ್, 23ನೇಯವರಾಗಿ ಮುಗಿಸಿದರು.
‘ಇಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ತುಂಬಾ ಖುಷಿಯಾಗಿದೆ. ಬಹುಕಾಲದ ಕನಸು ನನಸಾದ ಸಮಯವಿದು. ಮುಂದಿನ ರ್ಯಾಲಿಗಳಲ್ಲೂ ಇದೇ ಸಾಮರ್ಥ್ಯ ಮುಂದುವರಿಸಿ ಇನ್ನಷ್ಟು ಪ್ರಶಸ್ತಿ ಗೆಲ್ಲುವುದು ನನ್ನ ಗುರಿ. ಅದಕ್ಕಾಗಿ ಈಗಿನಿಂದಲೇ ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡು ಸಾಗುತ್ತೇನೆ’ ಎಂದು ಅಬ್ದುಲ್ ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.