ನವದೆಹಲಿ: ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳನ್ನು ಹುರಿದುಂಬಿಸುವ ‘ಚಿಯರ್ ಅಪ್’ ಅಭಿಯಾನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ಚಾಲನೆ ನೀಡಿದರು. ದೇಶದಾದ್ಯಂತ ನಡೆಯುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸಚಿವರು ಈ ಸಂದರ್ಭದಲ್ಲಿ ಕರೆ ನೀಡಿದರು.
‘ದೇಶದ 100 ಕ್ರೀಡಾಪಟುಗಳು ಈಗಾಗಲೇ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ದೇಶದ ವಿವಿಧ ಕಡೆಗಳಲ್ಲಿ ಆರು ಸಾವಿರ ಸೆಲ್ಫಿ ಪಾಯಿಂಟ್ಗಳನ್ನು ಇರಿಸಲಾಗುವುದು. ರೈಲು ನಿಲ್ದಾಣಗಳಲ್ಲಿ ಈ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲು ರೈಲ್ವೆ ಸಚಿವರು ಒಪ್ಪಿಕೊಂಡಿದ್ದಾರೆ’ ಎಂದು ಸಚಿವರು ವಿವರಿಸಿದರು.
‘ಹರಿಯಾಣದ ಮುಖ್ಯಮಂತ್ರಿಗಳು ಈಗಾಗಲೇ ಒಲಿಂಪಿಕ್ ಲಾಂಛನದೊಂದಿಗೆ ಸೆಲ್ಫಿ ಫೊಟೊ ತೆಗೆದುಕೊಂಡಿದ್ದಾರೆ. ದೇಶದ ಉದ್ದಗಲದಲ್ಲಿ ಇಂಥ ಪ್ರೇರಣಾತ್ಮಕ ಕಾರ್ಯಗಳು ನಡೆಯಬೇಕು. ಆ ಮೂಲಕ ದೇಶದ ಪ್ರಮುಖ ಶಕ್ತಿಗಳಲ್ಲಿ ಒಂದಾದ ಕ್ರೀಡೆಯನ್ನು ಬೆಳೆಸಲು ನೆರವಾಗಬೇಕು’ ಎಂದು ಸಚಿವರು ಕರೆ ನೀಡಿದರು.
ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಮಾತನಾಡಿ ಈ ಹಿಂದಿಗಿಂತ ಕ್ರೀಡಾಪಟುಗಳಲ್ಲಿ ಈ ಬಾರಿ ಹೆಚ್ಚು ಉತ್ಸಾಹ ತುಂಬಿದೆ. ಟೋಕಿಯೊ ಒಲಿಂಪಿಕ್ಸ್ಗೆ ಹುಮ್ಮಸ್ಸಿನೊಂದಿಗೆ ತೆರಳಲು ಸಜ್ಜಾಗಿದ್ದಾರೆ ಎಂದರು.
ಮಾಜಿ ಹಾಕಿ ಪಟು ಎಂ.ಎಂ.ಸೋಮಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಾಕಿ ತಂಡಕ್ಕೆ ಅತ್ಯುತ್ತಮ ಕೋಚ್ಗಳು ಲಭಿಸಿದ್ದಾರೆ. ಆದ್ದರಿಂದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಉತ್ತಮ ಸ್ಥಿತಿಯಲ್ಲಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.