ADVERTISEMENT

ಭಾರತಕ್ಕಾಗಿ ಆಡಿ ಅಭಿಯಾನಕ್ಕೆ ಮಯಂಕ್ ಅಗರವಾಲ್‌ ಬೆಂಬಲ

ಪಿಟಿಐ
Published 18 ಜೂನ್ 2020, 22:14 IST
Last Updated 18 ಜೂನ್ 2020, 22:14 IST
ಮಯಂಕ್ ಅಗರವಾಲ್ –ಪಿಟಿಐ ಚಿತ್ರ
ಮಯಂಕ್ ಅಗರವಾಲ್ –ಪಿಟಿಐ ಚಿತ್ರ   

ಬೆಂಗಳೂರು: ನಿತ್ಯಜೀವನಕ್ಕೆ ಕ್ರೀಡಾ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವವರಿಗೆ ಕೊರೊನಾ ಹಾವಳಿಯಿಂದ ಉಂಟಾಗಿರುವ ವಿಷಮ ಸ್ಥಿತಿ ಭಾರಿ ಪೆಟ್ಟು ನೀಡಿದೆ. ಮೂರು ತಿಂಗಳಿಂದ ಕ್ರೀಡಾ ಚಟುವಟಿಕೆ ಇಲ್ಲದೆ ಬೇಸಗೊಂಡಿರುವ ಅವರಲ್ಲಿ ನವೋತ್ಸಾಹ ತುಂಬುವುದಕ್ಕಾಗಿ ಆರಂಭವಾಗಿದೆ, ಭಾರತಕ್ಕಾಗಿ ಆಡು ಅಭಿಯಾನ (#ಪ್ಲೇಫಾರ್‌ಇಂಡಿಯಾ).

ದೇಶದ ಹೆಸರಾಂತ ಕ್ರೀಡಾಪಟುಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಕರ್ನಾಟಕದ ಮಯಂಕ್ ಅಗರವಾಲ್, ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ, ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್, ಜಿಮ್ನಾಸ್ಟ್‌ ದೀಪಾ ಕರ್ಮಾಕರ್, ಟೆನಿಸ್ ಪಟು ಸಾನಿಯಾ ಮಿರ್ಜಾ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ. ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್ ಮತ್ತು ಸುನಿಲ್ ಶೆಟ್ಟಿ ಕೂಡ ಅಭಿಯಾನದಲ್ಲಿದ್ದಾರೆ.

‘ಹೆಸರು ಗಳಿಸಿದ ಕ್ರೀಡಾಪಟುಗಳ ಹಿಂದೆ ಸಾಕಷ್ಟು ಕೈಗಳು ಇವೆ. ಅವರು ಮುಖ್ಯಧಾರೆಯಲ್ಲಿ ಕಾಣಿಸಿಕೊಳ್ಳದೇ ಇದ್ದರೂ ದೇಶದ ಕ್ರೀಡಾ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೀಗೆ ತೆರೆಮರೆಯಲ್ಲಿರುವವರಿಗೆ ಭರವಸೆ ತುಂಬುವುದು ಅಭಿಯಾನದ ಉದ್ದೇಶ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಸ್ವಚ್ಛತಾ ಕಾರ್ಮಿಕರು, ಉದ್ಯಾನ ನಿರ್ವಾಹಕರು, ಕೋಚ್‌ಗಳು, ಅಂಪೈರ್‌ಗಳು, ರೆಫರಿಗಳು ಮತ್ತು ಇತರ ನೆರವು ಸಿಬ್ಬಂದಿಗೆ ಈ ಅಭಿಯಾನದಡಿ ನೆರವು ಸಿಗಲಿದೆ’ ಎಂದು ತಿಳಿಸಲಾಗಿದೆ.

‘ಕ್ರೀಡೆಯಿಂದ ನಾವು ಪಡೆಯುತ್ತಿರುವ ಖುಷಿಗೆ ತೆರೆಮರೆಯಲ್ಲಿರುವವರ ಶ್ರಮವೂ ಕಾರಣ. ಅವರಿಗೆ ಆರ್ಥಿಕ ಮತ್ತು ಇತರ ನೆರವು ನೀಡುವುದು ಭಾರತಕ್ಕಾಗಿ ಆಡಿ ಯೋಜನೆಯ ಉದ್ದೇಶ. ದೇಶದ ಕ್ರೀಡೆಯ ಬೆನ್ನೆಲುಬು ಆಗಿರುವ ಅವರಿಗೆ ಬಲ ತುಂಬುವ ಕಾರ್ಯ ಶ್ಲಾಘನೀಯ’ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.