ಬೆಂಗಳೂರು:ಆಟಗಾರರ ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್ಐ) ಹಾಗೂ ಅಲ್ಟಿಮೇಟ್ ಕೊಕ್ಕೊ (ಯುಕೆಕೆ) ಜಂಟಿಯಾಗಿ ವೈಜ್ಞಾನಿಕ ತರಬೇತಿ ಶಿಬಿರವನ್ನು ಆಯೋಜಿಸಿವೆ. ಜನೆವರಿ 18ರಂದು ಶಿಬಿರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಉದ್ಘಾಟಿಸಿದರು. ಶಿಬಿರವು ಫೆಬ್ರುವರಿ 16ರವರೆಗೆ ನಡೆಯಲಿದೆ.
ಫರೀದಾಬಾದ್ನ ಮನವ್ ರಚನಾ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಶಿಬಿರದಲ್ಲಿ 18 ಮಹಿಳೆಯರು ಸೇರಿದಂತೆ 138 ಮಂದಿ ಆಟಗಾರರು ಭಾಗವಹಿಸಲಿದ್ದಾರೆ. ಗುರುಗ್ರಾಮದಲ್ಲಿರುವ ಎಸ್ಜಿಟಿ ವಿಶ್ವವಿದ್ಯಾನಿಲಯದ ತಜ್ಞರು ಮೇಲ್ವಿಚಾರಣೆ ಮಾಡಲಿದ್ದಾರೆ.
ಈ ತರಬೇತಿಯನ್ನು ಪರಿವರ್ತನೆ, ಪೂರ್ವ ಸಿದ್ಧತೆ ಮತ್ತು ಸ್ಪರ್ಧಾತ್ಮಕ ಎಂದು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ.
ಶಿಬಿರದ ಉದ್ಘಾಟನೆಯ ಸಂದರ್ಭದಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಒಲಿಂಪಿಕ್ಸ್ ಪದಕ ವಿಜೇತ ಶೂಟಿಂಗ್ ತಾರೆ ಅಭಿನವ್ ಬಿಂದ್ರಾ, ಕುಸ್ತಿಪಟು ಸುಶೀಲ್ಕುಮಾರ್, ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಮೊಹಮ್ಮದ್ ಶಮಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.