ADVERTISEMENT

ಚುನಾವಣೆಗಿಂತ ಆಯ್ಕೆ ಟ್ರಯಲ್ಸ್‌ಗೆ ಆದ್ಯತೆ: ಪಿ.ಟಿ.ಉಷಾ

ಪಿಟಿಐ
Published 7 ಜೂನ್ 2023, 5:23 IST
Last Updated 7 ಜೂನ್ 2023, 5:23 IST
ಪಿ.ಟಿ.ಉಷಾ
ಪಿ.ಟಿ.ಉಷಾ   

ಸೋನೆಪತ್‌: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಚುನಾವಣೆಯ ವಿಳಂಬವನ್ನು ಸಮರ್ಥಿಸಿರುವ ಭಾರತ ಒಲಿಂಪಿಕ್‌ (ಐಒಎ) ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರು, ಅದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಜೂನಿಯರ್‌ ಕುಸ್ತಿಪಟುಗಳ ಆಯ್ಕೆ ಟ್ರಯಲ್ಸ್‌ಗೆ ಸಂಸ್ಥೆ ನೀಡಬೇಕಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಕುಸ್ತಿ ಫೆಡರೇಷನ್‌ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಐಒಎ ಏಪ್ರಿಲ್‌ 27ರಂದು ಮೂವರು ಸದಸ್ಯರ ಅಡ್‌ಹಾಕ್‌ ಸಮಿತಿಯ ಘೋಷಣೆ ಮಾಡಿತ್ತು. 45 ದಿನಗಳ ಒಳಗೆ ಫೆಡರೇಷನ್‌ಗೆ ಚುನಾವಣೆ ನಡೆಸುವುದಾಗಿಯೂ ಹೇಳಿತ್ತು. ಆದರೆ ಇದುವರೆಗೆ ಸಮಿತಿಗೆ ಮೂರನೇ ಸದಸ್ಯ ನೇಮಕ ಆಗಿಲ್ಲ. ಈ ಸ್ಥಾನಕ್ಕೆ ಬರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರು ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ. ಐಒಎ ಹೇಳಿರುವ 45 ದಿನಗಳ ಗಡುವು ಜೂನ್‌ 17ಕ್ಕೆ ಅಂತ್ಯಗೊಳ್ಳಲಿದೆ.

ಸಮಿತಿಯ ಇತರ ಇಬ್ಬರು ಸದಸ್ಯರು– ಭೂಪೆಂದರ್‌ ಸಿಂಗ್‌ ಬಾಜ್ವಾ ಮತ್ತು ಸುಮಾ ಶೀರೂರು ಅವರು ಮೇ 4ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಮಿತಿಯು, ಏಷ್ಯನ್‌ ಚಾಂಪಿಯನ್‌ಷಿಪ್‌ಗೆ 15 ಮತ್ತು 20 ವರ್ಷದೊಳಗಿನವರ ತಂಡದ ಆಯ್ಕೆಗೆ ಟ್ರಯಲ್ಸ್‌ ಉಸ್ತುವಾರಿ ವಹಿಸಿದೆ.

ADVERTISEMENT

‘ಕಿರಿಯ ಕುಸ್ತಿಪಟುಗಳ ಹಿತರಕ್ಷಣೆಯ ದೃಷ್ಟಿಯಿಂದ ನಾವು ಚುನಾವಣೆಯ ಬದಲು ಟ್ರಯಲ್ಸ್‌ಗೆ ಆದ್ಯತೆ ನೀಡಬೇಕಾಗಿದೆ’ ಎಂದು ಉಷಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರು ಟ್ರಯಲ್ಸ್‌ ನಡೆಯುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ್ದರು.

ಅಡ್‌ಹಾಕ್‌ ಸಮಿತಿಗೆ ಮೂರನೇ ಸದಸ್ಯನ ಆಯ್ಕೆ ಹಾಗೂ ಫೆಡರೇಷನ್‌ಗೆ ಚುನಾವಣೆಯ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಉಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.