ಢಾಕಾ: ಸೆಮಿಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ಜಪಾನ್ ಸವಾಲು ಎದುರಿಸಲಿದೆ. ರೌಂಡ್ ರಾಬಿನ್ನಲ್ಲಿ ತಂಡದ ಅಂತಿಮ ಪಂದ್ಯ ಇದಾಗಿದ್ದು, ಗೆಲುವಿನ ಭರವಸೆಯಲ್ಲಿ ಮನ್ಪ್ರೀತ್ ಬಳಗವಿದೆ.
ಟೂರ್ನಿಯಲ್ಲಿ ನಿಧಾನಗತಿಯ ಆರಂಭ ಮಾಡಿದ್ದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ, ಬಳಿಕ ಪುಟಿದೆದ್ದಿತ್ತು. ಸತತ ಎರಡು ಗೆಲುವುಗಳ ಮೂಲಕ ಭರ್ಜರಿ ಲಯಕ್ಕೆ ಮರಳಿತ್ತು.
ಟೋಕಿಯೊ ಒಲಿಂಪಿಕ್ಸ್ ಬಳಿಕ ಮೊದಲ ಟೂರ್ನಿ ಆಡುತ್ತಿರುವ ತಂಡವು ಮೊದಲ ಪಂದ್ಯದಲ್ಲಿ 2–2ರಿಂದ ಕೊರಿಯಾದೊಂದಿಗೆ ಡ್ರಾ ಸಾಧಿಸಿತ್ತು. ಬಳಿಕ ಬಾಂಗ್ಲಾ ತಂಡವನ್ನು 9–0ಯಿಂದ ಪರಾಭವಗೊಳಿಸಿದರೆ, ಶುಕ್ರವಾರ ಪಾಕಿಸ್ತಾನ ತಂಡವನ್ನು 3–1ರಿಂದ ಮಣಿಸಿತ್ತು. ಮೂರು ಪಂದ್ಯಗಳ ಮೂಲಕ ಏಳು ಪಾಯಿಂಟ್ಸ್ ಗಳಿಸಿರುವ ಭಾರತ ಈಗ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಲಲಿತ್ ಉಪಾಧ್ಯಾಯ, ಆಕಾಶದೀಪ್ ಸಿಂಗ್ ಮತ್ತು ದಿಲ್ಪ್ರೀತ್ ಸಿಂಗ್ ಅವರನ್ನೊಳಗೊಂಡ ಫಾರ್ವರ್ಡ್ ಆಟಗಾರರ ಬಲ ಭಾರತ ತಂಡಕ್ಕಿದೆ. ಮಿಡ್ಫೀಲ್ಡ್ನಲ್ಲಿ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಉಪನಾಯಕ ಹರ್ಮನ್ಪ್ರೀತ್ ಸಿಂಗ್ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಗೋಲ್ಕೀಪಿಂಗ್ನಲ್ಲಿ ಮಿಂಚುತ್ತಿರುವ ಸೂರಜ್ ಕರ್ಕೇರಾ ಎದುರಾಳಿ ತಂಡಗಳ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಮನ್ಪ್ರೀತ್ ಬಳಗ ಜಪಾನ್ ತಂಡಕ್ಕೆ 5–3ರಿಂದ ಸೋಲುಣಿಸಿತ್ತು. ಅದೇ ವಿಶ್ವಾಸದೊಂದಿಗೆ ಇಲ್ಲಿಯೂ ಕಣಕ್ಕಿಳಿಯಲಿದೆ.
ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ–ಬಾಂಗ್ಲಾದೇಶ ಸೆಣಸಲಿವೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.