ನವದೆಹಲಿ: ಪಿ.ವಿ. ಸಿಂಧು ಅವರು ಇದೇ 11ರಿಂದ 16ರವರೆಗೆ ಚೀನಾದ ಕ್ವಿಂಗ್ಡಾವ್ನಲ್ಲಿ ನಡೆಯಲಿರುವ ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಿಂದ ಹಿಂದೆ ಸರಿದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕಂಚಿನ ಗೆದ್ದ ಭಾರತ ತಂಡದ ಭಾಗವಾಗಿದ್ದ 29 ವರ್ಷ ವಯಸ್ಸಿನ ಸಿಂಧು ಅವರು, ಪ್ರಸ್ತುತ ಮಂಡಿರಜ್ಜು (ಹ್ಯಾಮ್ಸ್ಟ್ರಿಂಗ್) ಸೆಳೆತದಿಂದ ಬಳಲುತ್ತಿದ್ದಾರೆ. ಈ ಬಾರಿ ಸುಧಾರಿತ ಪ್ರದರ್ಶನದೊಂದಿಗೆ ಪದಕದ ಬಣ್ಣ ಬದಲಾಯಿಸುವ ಗುರಿ ಭಾರತದ ಮುಂದಿದೆ.
ಭಾರತದ ಸಿಂಗಲ್ಸ್ ಆಟಗಾರರಾದ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್, ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಗುವಾಹಟಿಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
‘ಫೆ.5ರಂದು ಗುವಾಹಟಿಯ ಶಿಬಿರದಲ್ಲಿದ್ದಾಗ ಮಂಡಿರಜ್ಜು ಸೆಳೆತ ಕಾಣಿಸಿಕೊಂಡಿದೆ. ಚೇತರಿಕೆಗೆ ನಾನು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ಬೇಕಾಗಲಿದೆ ಎಂದು ಎಂಆರ್ಐ ಸ್ಕ್ಯಾನಿಂಗ್ನಿಂದ ತಿಳಿಯಿತು. ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ತಿಳಿಸಲು ಬೇಸರವಾಗುತ್ತಿದೆ’ ಎಂದು ಸಿಂಧು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಬಾರಿಯ ರನ್ನರ್ ಅಪ್ ದಕ್ಷಿಣ ಕೊರಿಯಾ, ಮಕಾವು ಜೊತೆ ಭಾರತ ತಂಡವು ಡಿ ಗುಂಪಿನಲ್ಲಿದೆ. ಫೆ.12ರಂದು ಮಕಾವು ವಿರುದ್ಧ ಭಾರತ ಅಭಿಯಾನ ಆರಂಭಿಸಲಿದೆ. 13ರಂದು ಕೊರಿಯಾ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.