ಬ್ಯಾಂಕಾಕ್: ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ ಟೂರ್ನಿಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಮೊದಲ ಬಾರಿ ಚಿನ್ನದ ಪದಕ ಜಯಿಸುವ ಛಲದಲ್ಲಿವೆ.
ಭಾನುವಾರದಿಂದ ಇಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡಗಳಿಗೆ ಲಕ್ಷ್ಯ ಸೇನ್ ಮತ್ತು ಪಿ.ವಿ.ಸಿಂಧು ನೇತೃತ್ವ ವಹಿಸಲಿದ್ದಾರೆ.
ಥಾಮಸ್ ಕಪ್ ಟೂರ್ನಿಯಲ್ಲಿ ಪುರುಷರ ತಂಡವು ಒಮ್ಮೆಯೂ ಪದಕ ಜಯಿಸಿಲ್ಲ. ಕನಿಷ್ಠ ಸೆಮಿಫೈನಲ್ ಕೂಡ ತಲುಪಿಲ್ಲ. ಆದರೆ ಮಹಿಳಾ ತಂಡವು ಊಬರ್ ಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ (2014 ಮತ್ತು 2016ರ ಆವೃತ್ತಿ) ಕಂಚಿನ ಪದಕದ ಸಾಧನೆ ಮಾಡಿದೆ.
ಕಳೆದ ವರ್ಷ ಉಭಯ ತಂಡಗಳು ಕ್ವಾರ್ಟರ್ಫೈನಲ್ನಲ್ಲೇ ಅಭಿಯಾನ ಕೊನೆಗೊಳಿಸಿದ್ದವು.
ಈ ಬಾರಿ ಪುರುಷರ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಜರ್ಮನಿ ಸವಾಲು ಎದುರಿಸಲಿದೆ. ಚೀನಾ ತೈಪೆ ಮತ್ತು ಕೆನಡಾ ಈ ಗುಂಪಿನಲ್ಲಿರುವ ಇನ್ನುಳಿದ ತಂಡಗಳು.
ಡಿ ಗುಂಪಿನಲ್ಲಿರುವ ಮಹಿಳಾ ತಂಡಕ್ಕೆ ದಕ್ಷಿಣ ಕೊರಿಯಾ, ಕೆನಡಾ ಮತ್ತು ಅಮೆರಿಕ ತಂಡಗಳನ್ನು ಎದುರಿಸಬೇಕಿದೆ.ಡ್ರಾ ಪ್ರಕಾರ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ನಾಕೌಟ್ಗೆ ಅರ್ಹತೆ ಗಳಿಸಲಿವೆ.
ಭಾರತ ತಂಡಗಳು: ಪುರುಷರು: ಸಿಂಗಲ್ಸ್: ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್, ಎಚ್.ಎಸ್ದ್.ಪ್ರಣಯ್, ಪ್ರಿಯಾಂಶು ರಾಜಾವತ್. ಡಬಲ್ಸ್: ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಎಂ.ಆರ್. ಅರ್ಜುನ್, ಧ್ರುವ ಕಪಿಲ, ಕೃಷ್ಣಪ್ರಸಾದ್ ಗರಗ, ವಿಷ್ಣುವರ್ಧನ್ ಗೌಡ್ ಪಂಜಾಲ.
ಮಹಿಳೆಯರು: ಸಿಂಗಲ್ಸ್: ಪಿ.ವಿ.ಸಿಂಧು, ಆಕರ್ಷಿ ಕಶ್ಯಪ್, ಅಸ್ಮಿತಾ ಚಲಿಹಾ, ಉನ್ನತಿ ಹೂಡಾ. ಡಬಲ್ಸ್: ಗಾಯತ್ರಿ ಗೋಪಿಚಂದ್, ತ್ರೀಶಾ ಜೋಲಿ, ಸಿಮ್ರನ್ ಸಿಂಘಿ, ರಿತಿಕಾ ಥಾಕರ್, ತನಿಶಾ ಕ್ರಾಸ್ತೊ, ಶೃತಿ ಮಿಶ್ರಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.