ADVERTISEMENT

ಭಾರತದಲ್ಲಿ ಟೆನಿಸ್ ಕ್ರೀಡಾ ವ್ಯವಸ್ಥೆ ಸುಧಾರಣೆಯಾಗಲಿ: ಸೋಮದೇವ್ ದೇವವರ್ಮನ್

ಗಿರೀಶದೊಡ್ಡಮನಿ
Published 29 ಜನವರಿ 2022, 14:13 IST
Last Updated 29 ಜನವರಿ 2022, 14:13 IST
ಸೋಮದೇವ್ ದೇವವರ್ಮನ್
ಸೋಮದೇವ್ ದೇವವರ್ಮನ್   

ಬೆಂಗಳೂರು: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಆಟಗಾರರ ಪ್ರಶಸ್ತಿ ಜಯದ ಕನಸು ಕಮರಿದೆ.

ಪುರುಷರ ಸಿಂಗಲ್ಸ್, ಡಬಲ್ಸ್‌ನಲ್ಲಿ ಯೂಕಿ ಬಾಂಭ್ರಿ, ರಾಮಕುಮಾರ್ ರಾಮನಾಥನ್, ಪ್ರಜ್ಞೇಶ್ ಗುಣೇಶ್ವರನ್, ಮಹಿಳೆಯರ ವಿಭಾಗದಲ್ಲಿ ಅಂಕಿತಾ ರೈನಾ, ಸಾನಿಯ ಮಿರ್ಜಾ ಹೊರಬಿದ್ದಿದ್ದಾರೆ. ಇದು ಟೆನಿಸ್‌ಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ.

ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಸೋಮದೇವ್ ದೇವವರ್ಮನ್ ಅವರಿಗೂ ಇದು ಹತಾಶೆ ತಂದಿದೆ.

ADVERTISEMENT

‘ಭಾರತದಲ್ಲಿ ಟೆನಿಸ್‌ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಯುವ ರೀತಿಯಲ್ಲಿ ವ್ಯವಸ್ಥೆ ರೂಪುಗೊಂಡಿಲ್ಲ. ಹಳೆಯದನ್ನು ಬದಲಿಸಿ ಹೊಸ ವ್ಯವಸ್ಥೆ ರೂಪಿಸುವ ಪ್ರಯತ್ನವೂ ಆಗಿಲ್ಲ’ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

’ಈ ಚರ್ಚೆಯನ್ನು ನಾವು ಬಹಳ ವರ್ಷಗಳಿಂದ ಮಾಡುತ್ತೇಲೆ ಇದ್ದೇವೆ. ಆದರೆ ಯವುದೂ ಬದಲಾಗಿಲ್ಲ. ಇದು ದುರದೃಷ್ಟಕರ ಸಂಗತಿಯಾಗಿದೆ. ವ್ಯವಸ್ಥೆಯನ್ನು ಅಮೂಲಾಗ್ರಾವಾಗಿ ಬದಲಿಸದಿದ್ದರೆ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗದು. ಪವಾಡವೂ ನಡೆಯುವುದಿಲ್ಲ’ ಎಂದರು.

2013ರಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಸೋಮದೇವ್ ಅವರು ಎರಡನೇ ಸುತ್ತು ತಲುಪಿಸಿದ್ದರು. ಅವರು ಮುಂಬರುವ ಡೆನ್ಮಾರ್ಕ್ ವಿರುದ್ಧದ ಡೇವಿಸ್ ಕಪ್ ಟೆನಿಸ್‌ನಲ್ಲಿ ಆಡಲಿರುವ ಯುವ ಆಟಗಾರರಾದ ಸುಮಿತ್ ನಗಾಲ್ ಮತ್ತು ಕಮ್ರನ್ ಥಂಡಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಮೂರು ಸೆಟ್‌ಗಳ ಪಂದ್ಯದ ಮಾದರಿಯು ನಮಗೆ ಬಹಳ ಅನುಕೂಲಕರವಾಗಿದೆ. ಏಕೆಂದರೆ ನಮ್ಮಲ್ಲಿ ಐದು ಸೆಟ್‌ಗಳಲ್ಲಿ ಸೆಣಸುವ ಆಟಗಾರರು ಕಡಿಮೆ ಇದ್ದಾರೆ’ ಎಂದು ಸೋನಿ ಸ್ಪೋರ್ಟ್ಸ್ ಆಯೋಜಿಸಿದ್ದ ಸಂವಾದದಲ್ಲಿ ಅಭಿಪ್ರಾಯಪಟ್ಟರು.

ನೊವಾಕ್ ಜೊಕೊವಿಚ್ ವೀಸಾ ರದ್ದು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಟೆನಿಸ್ ಆಸ್ಟ್ರೇಲಿಯಾ ಮತ್ತು ಜೊಕೊವಿಚ್ ಇಬ್ಬರೂ ಈ ಪ್ರಕರಣವನ್ನುಚೆನ್ನಾಗಿ ನಿಭಾಯಿಸಬಹುದಿತ್ತು. ಆಸ್ಟ್ರೇಲಿಯಾ ಸರ್ಕಾರವೂ ಸ್ವಲ್ಪ ಎಚ್ಚರ ವಹಿಸಬೇಕಿತ್ತು. ಈಗ ನಡೆದಿರುವುದು ಕ್ರೀಡೆಯ ದೃಷ್ಟಿಯಿಂದ ಹಿತಕರವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.