ADVERTISEMENT

ಬ್ಯಾಡ್ಮಿಂಟನ್: ರ‍್ಯಾಂಕಿಂಗ್‌ ಪಾಯಿಂಟ್ಸ್‌ಗಳ ಮೇಲೆ ಶ್ರೀಕಾಂತ್ ಕಣ್ಣು

ಆರ್ಲಿಯನ್ಸ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 22 ಮಾರ್ಚ್ 2021, 14:08 IST
Last Updated 22 ಮಾರ್ಚ್ 2021, 14:08 IST
ಕಿದಂಬಿ ಶ್ರೀಕಾಂತ್–ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್–ಪಿಟಿಐ ಚಿತ್ರ   

ಪ್ಯಾರಿಸ್‌: ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಅನುಭವಿಸಿದ ನಿರಾಸೆಯನ್ನು ಮರೆಯುವ ಹಂಬಲದಲ್ಲಿರುವ ಭಾರತದ ಕಿದಂಬಿ ಶ್ರೀಕಾಂತ್ ಹಾಗೂ ತಂಡವು ಇಲ್ಲಿ ನಡೆಯಲಿರುವ ಆರ್ಲಿಯನ್ಸ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

ಮಂಗಳವಾರದಿಂದಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಗಾಯದ ಹಿನ್ನೆಲೆಯಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಹಿಂದೆ ಸರಿದಿದ್ದ ಸೈನಾ ಸೆಹ್ವಾಲ್‌ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡುವ ಕುರಿತು ಬುಧವಾರ ನಿರ್ಧರಿಸಲಿದ್ದಾರೆ.

ಭಾರತದ ಆಟಗಾರರು ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ರ‍್ಯಾಂಕಿಂಗ್ ಪಾಯಿಂಟ್ಸ್ ಗಳಿಸಲು ಈ ಟೂರ್ನಿಯಲ್ಲಿ ಪ್ರಯತ್ನಿಸಲಿದ್ದಾರೆ.

ADVERTISEMENT

‘ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದ ನಂತರ ಸೈನಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ ಅಭ್ಯಾಸದಲ್ಲೂ ಪಾಲ್ಗೊಂಡಿದ್ದರು. ಆದರೆ ಅವರು ಆರ್ಲಿಯನ್ಸ್ ಮಾಸ್ಟರ್ಸ್‌ನಲ್ಲಿ ಕಣಕ್ಕಿಳಿಯುವುದು ಇನ್ನೂ ಖಚಿತಪಟ್ಟಿಲ್ಲ. ಒಲಿಂಪಿಕ್ಸ್ ಅರ್ಹತೆಗೆ ಈ ಟೂರ್ನಿ ಅವರಿಗೆ ಮಹತ್ವದ್ದಾಗಿದೆ‘ ಎಂದು ಭಾರತ ತಂಡದ ಫಿಸಿಯೊಥೆರಪಿಸ್ಟ್‌ ಸಿ. ಕಿರಣ್ ತಿಳಿಸಿದ್ದಾರೆ.

ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಶ್ರೀಕಾಂತ್ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಸೈನಾ ಅವರು ಮಲೇಷ್ಯಾದ ಕಿಸೋನಾ ಸೆಲ್ವಾದುರಾಯ್ ಎದುರು ಆಡಬೇಕಿದೆ.

ಅಜಯ್ ಜಯರಾಮ್ ಅವರು ಫಿನ್‌ಲೆಂಡ್‌ನ ಕ್ಯಾಲ್ಲೆ ಕೊಲೊಜೊನೆನ್ ಎದುರು ಸೆಣಸಲಿದ್ದು, ಪರುಪಳ್ಳಿ ಕಶ್ಯಪ್ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್‌.ಎಸ್‌.ಪ್ರಣಯ್‌, ಸಿರಿಲ್ ವರ್ಮಾ, ಚಿರಾಗ್ ಸೇನ್‌, ಕಿರಣ್ ಜಾರ್ಜ್‌ ಹಾಗೂ ಶುಭಾಂಕರ್ ಡೇ ಕೂಡ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನಪ್ಪ– ಎನ್‌.ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರಿ ಚೋಪ್ರಾ–ಸಿಕ್ಕಿ, ಅಶ್ವಿನಿ–ಧೃವ ಕಪಿಲ ಆಡಲಿದ್ದಾರೆ.

ಎಂ.ಆರ್‌.ಅರ್ಜುನ್‌–ಧೃವ ಜೋಡಿಯು ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.