ADVERTISEMENT

ಡೆನ್ಮಾರ್ಕ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮನು ಅತ್ರಿ– ಸಾಯಿ ಪ್ರಣೀತ್‌ಗೆ ಸೋಲು

ಪಿಟಿಐ
Published 19 ಅಕ್ಟೋಬರ್ 2021, 13:30 IST
Last Updated 19 ಅಕ್ಟೋಬರ್ 2021, 13:30 IST
ಕಿದಂಬಿ ಶ್ರೀಕಾಂತ್‌– ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್‌– ಪಿಟಿಐ ಚಿತ್ರ   

ಆಡೆನ್ಸ್: ಮಾಜಿ ಚಾಂಪಿಯನ್‌, ಭಾರತದ ಕಿದಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಅವರು ಡೆನ್ಮಾರ್ಕ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಶುಭಾರಂಭ ಮಾಡಿದರು.

2017ರ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್‌ ಅವರು, ಮೊದಲ ಸುತ್ತಿನ ಪಂದ್ಯದಲ್ಲಿ 21-14, 21-11ರಿಂದ ಭಾರತದವರೇ ಆದ ಬಿ.ಸಾಯಿ ಪ್ರಣೀತ್ ಅವರನ್ನು ಮಣಿಸಿದರು. ಕೇವಲ 30 ನಿಮಿಷಗಳಲ್ಲಿ ಅವರಿಗೆ ಜಯ ಒಲಿಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿರುವ ಸಮೀರ್ ವರ್ಮಾ ಅವರು 21-17, 21-14ರಿಂದ ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿದ್ಸನ್‌ ಎದುರು ಗೆದ್ದರು. 21ನೇ ರ‍್ಯಾಂಕಿನ ಆಟಗಾರನನ್ನು ಸಮೀರ್‌ 42 ನಿಮಿಷಗಳಲ್ಲಿ ಮಣಿಸಿದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 14ನೇ ಸ್ಥಾನದಲ್ಲಿರುವ ಶ್ರೀಕಾಂತ್ ಅವರಿಗೆ ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ. ಅವರಿಗೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರ, ಜಪಾನ್‌ನ ಕೆಂಟೊ ಮೊಮೊಟಾ ಮುಖಾಮುಖಿಯಾಗುವ ಸಾಧ್ಯತೆಯಿದೆ. ಸಮೀರ್ ಅವರು ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆಂಡರ್ಸ್‌ ಆ್ಯಂಟನ್ಸೆನ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ–ಬಿ.ಸಾಯಿ ಪ್ರಣೀತ್ ಅವರು 18-21, 11-21ರಿಂದ ಮಲೇಷ್ಯಾದ ಗೋ ಜೆ ಫೆಯ್‌ ಹಾಗೂ ನೂರ್‌ ಇಜ್ಜುದ್ದೀನ್ ಎದುರು ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.