ಚೆನ್ನೈ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ತಮಿಳುನಾಡಿನ ಕ್ರೀಡಾಪಟುವಿಗೆ ₹ 3 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಶನಿವಾರ ತಿಳಿಸಿದರು. ಬೆಳ್ಳಿ ಪದಕ ಗಳಿಸುವವರಿಗೆ ₹ 2 ಕೋಟಿ ಮತ್ತು ಕಂಚಿನ ಪದಕ ಗೆಲ್ಲುವವರಿಗೆ ₹ 1 ಕೋಟಿ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.
‘ಕ್ರೀಡೆಗೆ ಪ್ರೋತ್ಸಾಹ ನೀಡಲು ಮತ್ತು ಕ್ರೀಡಾಪಟುಗಳನ್ನು ಬೆಳೆಸಲು ಸರ್ಕಾರ ಬದ್ಧವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವವರನ್ನು ಗೌರವಿಸಬೇಕಾಗಿದೆ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ಸರ್ಕಾರದ ಪರವಾಗಿಯೇ ಈ ಹಣವನ್ನು ನೀಡಲಾಗುವುದು’ ಎಂದು ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮುಖ್ಯಮಂತ್ರಿ ತಿಳಿಸಿದರು.
ಒಲಿಂಪಿಕ್ಸ್ಗೆ ಆಯ್ಕೆಯಾಗಿರುವ ನೇತ್ರಾ ಕುಮಾರನ್, ವರುಣ್ ಠಕ್ಕರ್, ಕೆ.ಸಿ.ಗಣಪತಿ, ಜಿ.ಸತೀಶ್, ಶರತ್ ಕಮಲ್ ಮತ್ತು ಪ್ಯಾರಾಲಿಂಪಿಯನ್ ಮರಿಯಪ್ಪನ್ ತಂಗವೇಲು ಅವರಿಗೆ ತಲಾ ₹ 5 ಲಕ್ಷವನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಫೆನ್ಸಿಂಗ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವ ಭಾರತದ ಮೊದಲ ಮಹಿಳಾ ಕ್ರೀಡಾಪಟು ಸಿ.ಎ.ಭವಾನಿ ಅವರಿಗೆ ಈಗಾಗಲೇ ತಮಿಳುನಾಡು ಸರ್ಕಾರದ ವತಿಯಿಂದ ₹ 5 ಲಕ್ಷ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.