ADVERTISEMENT

ಅಥ್ಲೆಟಿಕ್ಸ್ ಇಂದಿನಿಂದ; ನಡಿಗೆಯಲ್ಲಿ ಏಕೈಕ ಅಥ್ಲೀಟ್, ಸ್ಪರ್ಧೆ ರದ್ದು?

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 23:31 IST
Last Updated 2 ಜೂನ್ 2023, 23:31 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣ
ಬೆಂಗಳೂರಿನ ಕಂಠೀರವ ಕ್ರೀಡಾಂಗಣ   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಹಾಗೂ ಭಾನುವಾರ ರಾಜ್ಯ ಸೀನಿಯರ್ ಮುಕ್ತ ಅಥ್ಲೆಟಿಕ್ ಕೂಟ ನಡೆಯಲಿದೆ.

ಆದರೆ ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಏಕೈಕ ಸ್ಪರ್ಧಿ ಇದ್ದಾರೆ. ಆದ್ದರಿಂದ ಈ ಸ್ಪರ್ಧೆಯನ್ನು ರದ್ದುಗೊಳಿಸಲು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ತೀರ್ಮಾನಿಸಿದೆ. ಆದರೆ ಈ ಕ್ರಮಕ್ಕೆ ಸ್ಪರ್ಧಿ ಐ. ರಕ್ಷಿತಾ ಅವರ ಕೋಚ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ನಿರ್ದೇಶಕ ಬಾಲಚಂಚ್ರ ಪುತ್ತೂರು ಬೇಸರ ವ್ಯಕ್ಪಪಡಿಸಿದ್ದಾರೆ. 

’ಮಹಿಳೆಯರ 20 ಕಿ.ಮೀ ರೇಸ್ ನಡಿಗೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಸ್ಪರ್ಧಿಸುತ್ತಿದ್ದಾರೆ. ಆದರೆ ಈ ಸ್ಪರ್ಧೆಯಲ್ಲಿ ಅವರೊಬ್ಬರೇ ಇರುವುದರಿಂದ ರದ್ದುಗೊಳಿಸುತ್ತಿರುವುದು ಸರಿಯಲ್ಲಿ ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್ ನಿಯಮದ ಪ್ರಕಾರ ಒಬ್ಬರೇ ಸ್ಪರ್ಧಿ ಇದ್ದರೂ ಅವಕಾಶ ನೀಡಬೇಕು. ಅವರು ಗುರಿ ಮುಟ್ಟಲು ತೆಗೆದುಕೊಳ್ಳುವ ಸಮಯದ ಆಧಾರದಲ್ಲಿ ಸ್ಥಾನ ಪರಿಗಣಿಸಬೇಕು. ಈ ಕೂಟದಲ್ಲಿ ಗೆದ್ದವರಿಗೆ ರಾಷ್ಟ್ರೀಯ ಸೀನಿಯರ್ ಮುಕ್ತ ಅಥ್ಲೆಟಿಕ್ಸ್ ಮತ್ತು ಅಂತರ ಜಿಲ್ಲಾ ಸ್ಪರ್ಧೆಗೆ ಆಯ್ಕೆಯಾಗುವ ಅವಕಾಶವಿದೆ. ಒಂದೊಮ್ಮೆ 20 ಕಿ.ಮೀ ನಡಿಗೆ ರದ್ದಾದರೆ ರಕ್ಷಿತಾ ಅವಕಾಶವಂಚಿತರಾಗುವರು. ಈಚೆಗೆ ನಡೆದಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ದಕ್ಷಿಣ ವಲಯ ವಿವಿ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಲ್ಲಿಯೂ ಅವರು ಉತ್ತಮ ಸಾಧನೆ ಮಾಡುವ ಭರವಸೆ ಇದೆ. ಇಲ್ಲಿ ಗೆದ್ದವರಿಗೆ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಲಭಿಸಲಿದೆ. ಆದ್ದರಿಂದ ರಕ್ಷಿತಾಗೆ ಸ್ಪರ್ಧೆಯ ಅವಕಾಶ ನೀಡಬೇಕು‘ ಎಂದು ಬಾಲಚಂದ್ರ ಪುತ್ತೂರು ಮನವಿ ಮಾಡಿದ್ದಾರೆ.

ADVERTISEMENT

ಈ ಕುರಿತು ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿರುವ ಕೆಎಎ ಕಾರ್ಯದರ್ಶಿ ಎ.ರಾಜವೇಲು, ‘ನಿಯಮದ ಪ್ರಕಾರ ಕನಿಷ್ಠ ಮೂವರು ಇದ್ದರೆ ಮಾತ್ರ ಸ್ಪರ್ಧೆ ನಡೆಸಲಾಗುವುದು. ರಕ್ಷಿತಾ ಅವರಿಗೆ ಅನುಕೂಲ ಮಾಡಿಕೊಡಲು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ವಲಯ ವಿವಿ ಕೂಟದಲ್ಲಿ ಮಾಡಿರುವ ಸಾಧನೆಯ ಪ್ರಮಾಣ ಪತ್ರವನ್ನು ನಮಗೆ ಸಲ್ಲಿಸಲು ತಿಳಿಸಿದ್ದೇವೆ. ಆ ಪ್ರಮಾಣಪತ್ರಗಳನ್ನು ಎಐಎಫ್‌ಎಫ್‌ಗೆ ಕಳಿಸಿ, ರಾಷ್ಟ್ರಮಟ್ಟದ ಅರ್ಹತೆಗೆ ಪರಿಗಣಿಸಲು ಕೋರುತ್ತೇವೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.