ADVERTISEMENT

ಉತ್ತರ ಪ್ರದೇಶ: ಕ್ರೀಡಾಪಟುಗಳಿಗೆ ಆಮಿಷ, ಮೂವರ ಬಂಧನ

ಪಿಟಿಐ
Published 7 ನವೆಂಬರ್ 2020, 7:34 IST
Last Updated 7 ನವೆಂಬರ್ 2020, 7:34 IST
ಹಣ
ಹಣ   

ನವದೆಹಲಿ: ಮುಂದಿನ ವರ್ಷ ಪಂಚಕುಲದಲ್ಲಿ ನಡೆಯಲಿರುವ ಖೇಲೊ ಇಂಡಿಯಾ ಕೂಟದಲ್ಲಿ ಅವಕಾಶ ಕೊಡಿಸುವ ಭರವಸೆ ನೀಡಿ ಹೊಸ ಪೀಳಿಗೆಯ ಕ್ರೀಡಾಪಟುಗಳನ್ನು ವಂಚಿಸುತ್ತಿದ್ದ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವುದಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ. ಬಂಧಿತರ ಪೈಕಿ ಮಾಜಿ ಕಬಡ್ಡಿ ಆಟಗಾರರೊಬ್ಬರೂ ಇದ್ದಾರೆ ಎಂದು ತಿಳಿಸಲಾಗಿದೆ.

ತಪ್ಪು ಮಾಹಿತಿ ಒಳಗೊಂಡ ಜಾಹೀರಾತನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದಕ್ಕೆ ಮರುಳಾಗಿ ದೇಶದ ವಿವಿಧ ಕಡೆಯ ಅನೇಕ ಕ್ರೀಡಾಪಟುಗಳು ಮೋಸಹೋಗುತ್ತಿದ್ದಾರೆ ಎಂದು ಆರೋಪಿಸಿ ಸಾಯ್ ಎರಡು ದಿನಗಳ ಹಿಂದೆ ದೂರು ದಾಖಲಿಸಿತ್ತು. ₹ 6 ಸಾವಿರ ಪಾವತಿಸಿದರೆ ಅವಕಾಶ ಕೊಡಿಸುವುದಾಗಿ ಜಾಹೀರಾತು ನೀಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ವಿಡಿಯೊ ನೋಡಿ:

ADVERTISEMENT

‘ಸಂಜಯ್‌ ಪ್ರತಾಪ್ ಸಿಂಗ್, ಅನೂಜ್ ಕುಮಾರ್ ಮತ್ತು ರವಿ ಬಂಧಿತರು. ಆಗ್ರಾದ ಸಂಜಯ್ ಈ ಹಿಂದೆ ಕಬಡ್ಡಿ ಆಟಗಾರ ಆಗಿದ್ದರು. ರುದ್ರ ಪ್ರತಾಪ್ ಸಿಂಗ್ ಎಂಬ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಕ್ರೀಡಾಪಟುಗಳನ್ನು ಸಂಪರ್ಕಿಸುತ್ತಿದ್ದರು. ಉತ್ತರ ಪ್ರದೇಶದ ವಿವಿಧ ಕಡೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಅನೂಜ್ ಮತ್ತು ರವಿ ತಮ್ಮ ಖಾತೆ ಸಂಖ್ಯೆಯನ್ನು ನೀಡಿ ಹಣ ಜಮೆ ಮಾಡುವಂತೆ ತಿಳಿಸುತ್ತಿದ್ದರು. ಈ ಖಾತೆಗಳನ್ನು ಈಗ ನಿಷ್ಕ್ರಿಯಗೊಳಿಸಲಾಗಿದ್ದು ತನಿಖೆ ನಡೆಯುತ್ತಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.