ಮುದ್ದೇಬಿಹಾಳ (ವಿಜಯಪುರ): ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ, ಬಾಲಕರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡಗಳು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವು.
ಸೋಮವಾರ ಇಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ನಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡ ಬೆಂಗಳೂರು ದಕ್ಷಿಣ ಜಿಲ್ಲಾ ತಂಡವನ್ನು 25–23, 26–25, 25–21 ಅಂಕಗಳಿಂದ ಮಣಿಸಿ, ಪ್ರಶಸ್ತಿಗೆ ಭಾಜನವಾಯಿತು.
ಆರಂಭದಿಂದ ಅಂತ್ಯದವರೆಗೂ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಎರಡೂ ತಂಡಗಳು ಪ್ರಶಸ್ತಿಗಾಗಿ ಸೆಣಸಿದವು. ಉತ್ತರ ಕನ್ನಡ ಜಿಲ್ಲೆಯ ಕಿರಣ ಅತ್ಯುತ್ತಮ ಆಟವಾಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಾಲಕಿಯರ ವಿಭಾಗದ ಫೈನಲ್ ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲಾ ತಂಡಗಳ ನಡುವೆ ನಡೆಯಿತು. ಎರಡೂ ತಂಡಗಳ ಆಟಗಾರ್ತಿಯರು ಮೈನವಿರೇಳಿಸುವ ಪ್ರದರ್ಶನ ನೀಡಿದರು. ಅಂತಿಮವಾಗಿ ಬೆಳಗಾವಿ ತಂಡ 25–23, 23–25, 25–22, 13–25, 15–7 ಅಂತರದಿಂದ ವಿಜಯ ಸಾಧಿಸಿತು. ಸರಸ್ವತಿ ಹುಬ್ಬಳ್ಳಿ, ಶ್ವೇತಾ ಪೂಜಾರಿ, ಲಕ್ಷ್ಮೀ ತಾಂಬೋಡಿ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನ ರೂವಾರಿಗಳಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.