ADVERTISEMENT

ಕುಸ್ತಿ ಫೆಡರೇಷನ್ ಮೇಲಿನ ಅಮಾನತು ಹಿಂದಕ್ಕೆ

ಪಿಟಿಐ
Published 13 ಫೆಬ್ರುವರಿ 2024, 23:32 IST
Last Updated 13 ಫೆಬ್ರುವರಿ 2024, 23:32 IST
   

ನವದೆಹಲಿ: ಭಾರತದ ಕುಸ್ತಿ ಫೆಡರೇಷನ್‌ ಮೇಲೆ ಹೇರಿದ್ದ ತಾತ್ಕಾಲಿಕ ನಿಷೇಧವನ್ನು ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಹಿಂಪಡೆದಿದೆ. ಕುಸ್ತಿ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿರುವ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್ ಅವರ ವಿರುದ್ಧ ತಾರತಮ್ಯ ಮಾಡಬಾರದು ಎಂಬ ಬಗ್ಗೆ ಲಿಖಿತ ಖಾತರಿ ನೀಡಬೇಕು ಎಂದು ಫೆಡರೇಷನ್‌ಗೆ ನಿರ್ದೇಶನ ನೀಡಿದೆ.

ಭಾರತ ಕುಸ್ತಿ ಫೆಡರೇಷನ್ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣ ಕಳೆದ ವರ್ಷದ ಆಗಸ್ಟ್‌ 23ರಂದು ತಾತ್ಕಾಲಿಕ ನಿಷೇಧ ಹೇರಿತ್ತು.

‘ಫೆಬ್ರುವರಿ 9ರಂದು ಸಭೆ ಸೇರಿದ ಯುಡಬ್ಲ್ಯುಡಬ್ಲ್ಯು ಬ್ಯೂರೊ, ಅಮಾನತಿನ ಬಗ್ಗೆ ಮರುಪರಿಶೀಲನೆ ನಡೆಸಿ ಎಲ್ಲ ಮಾಹಿತಿಗಳ ಆಧಾರದ ಮೇಲೆ ಅಮಾನತನ್ನು ಹಿಂಪಡೆಯಲು ನಿರ್ಧರಿಸಿತು’ ಎಂದು (ಯುಡಬ್ಲ್ಯುಡಬ್ಲ್ಯು) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಹೀಗಾಗಿ ಇನ್ನು ಮುಂದೆ ಅಂತರರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ದೇಶದ ಹೆಸರಿನಲ್ಲಿ ಪೈಲ್ವಾನರು ಭಾಗವಹಿಸಲು ಅವಕಾಶವಾಗಲಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಕೆಲದಿನಗಳಲ್ಲೇ ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘನೆ ಆಧಾರದಲ್ಲಿ ಫೆಡರೇಷನ್‌ಅನ್ನು ಅಮಾನತುಗೊಳಿಸಿದ ಭಾರತ ಒಲಿಂಪಿಕ್ ಸಂಸ್ಥೆ ಮೂವರು ಸದಸ್ಯರ ಅಡ್‌ಹಾಕ್‌ ಸಮಿತಿಯನ್ನು ಕುಸ್ತಿ ವ್ಯವಹಾರಗಳ ಮೇಲ್ವಿಚಾರಣೆಗೆ ನೇಮಕ ಮಾಡಿತ್ತು.

‘ಯುಡಬ್ಲ್ಯುಡಬ್ಲ್ಯು ಮಾನ್ಯತೆ ದೊರೆತ ಕಾರಣ ಅಡ್‌ಹಾಕ್‌ ಸಮಿತಿಗೆ ಈಗ ಏನೂ ಮಾಹತ್ವ ಇಲ್ಲ. ಒಲಿಂಪಿಕ್ ವರ್ಷವಾಗಿರುವ ಕಾರಣ ನಾವು ಶೀಘ್ರ ಟ್ರಯುಲ್ಸ್‌ಗಳನ್ನು ನಡೆಸಲಿದ್ದೇವೆ. ಯಾವುದೇ ಕುಸ್ತಿಪಟುಗಳ ಭವಿಷ್ಯ ಅತಂತ್ರವಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಸಂಜಯ್ ಸಿಂಗ್ ಹೊಸ ಬೆಳವಣಿಗೆಯ ನಂತರ ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.