ನವದೆಹಲಿ: ಭಾರತದ ಪ್ರಮುಖ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ರವಿಕುಮಾರ್ ದಹಿಯಾ ಅವರು ವಿಶ್ವಚಾಂಪಿಯನ್ಷಿಪ್ನಲ್ಲಿ ಕಣಕ್ಕಿಳಿಯುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಇಲ್ಲಿ ಆಯ್ಕೆ ಟ್ರಯಲ್ಸ್ ನಡೆಯಿತು. ಕಜಕಸ್ತಾನದಲ್ಲಿ ಸೆಪ್ಟೆಂಬರ್ 14ರಿಂದ 22ರವರೆಗೆ ವಿಶ್ವಚಾಂಪಿಯನ್ಷಿಪ್ ಆಯೋಜನೆಯಾಗಿದೆ.
65 ಕೆಜಿ ವಿಭಾಗದಲ್ಲಿ ಬಜರಂಗ್ ಆಯ್ಕೆಯಾದರು. ಟ್ರಯಲ್ಸ್ನಲ್ಲಿ ಅವರಿಗೆ ಹಾಲಿ ರಾಷ್ಟ್ರೀಯ ಚಾಂಪಿಯನ್ ಹರ್ಫುಲ್ ಸಿಂಗ್ ಎದುರಾಗಿದ್ದರು. ಆದರೆ ಗಾಯದ ಕಾರಣ ಹರ್ಫುಲ್ ಎರಡು ಸುತ್ತುಗಳನ್ನೂ ಪೂರ್ಣಗೊಳಿಸಲಾಗಲಿಲ್ಲ.
57 ಕೆಜಿ ವಿಭಾಗದ ಟ್ರಯಲ್ಸ್ನಲ್ಲಿ ರವಿ ಅವರು ಈ ವಿಭಾಗದಲ್ಲಿ ಕಜಕಸ್ತಾನ ಟಿಕೆಟ್ ಒಲಿಸಿಕೊಂಡರು. ಫೈನಲ್ ಬೌಟ್ನಲ್ಲಿ ರಾಹುಲ್ ಅವರನ್ನು 12–2 ಅಂತರದಿಂದ ರವಿ ಚಿತ್ ಮಾಡಿದರು.
ಆದರೆ ಸಂದೀಪ್ ಥೋಮರ್ ಹಾಗೂ ಕಾಳೆ ಅವರಿಗೆ ಸೋಲುಣಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ರಾಹುಲ್ ಅವರು ರವಿ ಎದುರು ಮಂಕಾದರು.
86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ, ಪವನ್ ವಿರುದ್ಧ 5–0ಯಿಂದ ಗೆದ್ದರು. ರೋಮಾಂಚನಕಾರಿ ಬೌಟ್ಗಳಿಗೆ ಸಾಕ್ಷಿಯಾಗಿದ್ದು 97 ಕೆಜಿ ವಿಭಾಗ. ಅಂತಿಮವಾಗಿ ಫೈನಲ್ನಲ್ಲಿ ಮೌಸಮ್ ಖತ್ರಿ ಅವರು ಸತ್ಯವ್ರತ್ ಕಡಿಯಾನ್ ಅವರನ್ನು ಮಣಿಸಿ ಆಯ್ಕೆಯಾದರು. ಸುಮಿತ್ ಮಲಿಕ್ (125 ಕೆಜಿ ವಿಭಾಗ) ಫೈನಲ್ನಲ್ಲಿ ಸತ್ಯೇಂದರ್ ಎದುರು 3–0ಯಿಂದ ಜಯಭೇರಿ ಮೊಳಗಿಸಿದರು. ಜೀತೆಂದರ್ ಕುಮಾರ್ ಹಾಗೂ ಪ್ರವೀಣ್ ಕುಮಾರ್ ಗಾಯಗೊಂಡಿದ್ದರಿಂದ 74 ಕೆಜಿ ವಿಭಾಗದ ಟ್ರಯಲ್ಸ್ ಮುಂದಿನ ತಿಂಗಳಿಗೆ ಮುಂದೂಡಲಾಯಿತು. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ಕುಮಾರ್ ಇದೇ ವಿಭಾಗದಲ್ಲಿ ಸ್ಪರ್ಧಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.