ADVERTISEMENT

ಸಾಗರ್‌ ರಾಣಾ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್‌ ಕುಮಾರ್‌ ಸಹಚರರ ಬಂಧನ

ಪಿಟಿಐ
Published 26 ಮೇ 2021, 9:05 IST
Last Updated 26 ಮೇ 2021, 9:05 IST
ಸುಶೀಲ್‌ ಕುಮಾರ್‌
ಸುಶೀಲ್‌ ಕುಮಾರ್‌    

ನವದೆಹಲಿ: ಕುಸ್ತಿಪಟು ಸಾಗರ್‌ ರಾಣಾ(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ನಾಲ್ವರು ಸಹಚರರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಹರಿಯಾಣದ ಭೂಪೇಂದರ್‌(38), ಮೋಹಿತ್‌(22), ಗುಲಾಬ್‌(24) ಮತ್ತು ರೋಹ್ಟಕ್‌ ನಿವಾಸಿ ಮಂಜೀತ್‌(29) ಎಂದು ಗುರುತಿಸಲಾಗಿದೆ. ಆರೋಪಿಗಳ ಸುಳಿವು ಸಿಗುತ್ತಿದ್ದಂತೆ ರೋಹಿಣಿ ಜಿಲ್ಲಾ ಪೊಲೀಸ್‌ ವಿಶೇಷ ಕಾರ್ಯಪಡೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ. ಬಂಧಿತರೆಲ್ಲರೂ ಗ್ಯಾಂಗ್‌ಸ್ಟರ್‌ಗಳಾದ ಕಾಲಾ ಅಸೌಧ ಮತ್ತು ನೀರಜ್‌ ಬಾವಾನ ತಂಡಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಇವರೆಲ್ಲರ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ ವೇಳೆ, ಬೇರೆಯವರು ಈ ಹತ್ಯೆ ನಡೆಸಿದ್ದಾಗಿ ಮತ್ತು ಆ ಸ್ಥಳದಲ್ಲಿ ತಮ್ಮ ವಾಹನಗಳನ್ನು ಮತ್ತು ಆಯುಧಗಳನ್ನು ಬಿಟ್ಟಿದ್ದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಛತ್ರಸಾಲ್‌ ಕ್ರೀಡಾಂಗಣದಲ್ಲಿ ಮೇ 4ರ ತಡರಾತ್ರಿ ಕುಸ್ತಿಪಟು ಸಾಗರ್‌ ರಾಣಾ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಸಾಗರ್‌ ಮೃತಪಟ್ಟರು. ಮಾಡೆಲ್‌ ಟೌನ್‌ ಪ್ರದೇಶದಲ್ಲಿಯ ಆಸ್ತಿ ವಿಚಾರಕ್ಕಾಗಿ ಸುಶೀಲ್‌ ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್‌ ಅವರನ್ನು ಕಳೆದ ಭಾನುವಾರ ದೆಹಲಿ ಹೊರವಲಯದ ಮುಂಡ್ಕಾ ಪ್ರದೇಶದಲ್ಲಿ ದೆಹಲಿ ಪೊಲೀಸ್‌ ವಿಶೇಷ ಪಡೆ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.