ಬೆಂಗಳೂರು: ಕರ್ನಾಟಕದ ಶಿಲ್ಪಾ ಕೆ.ಪಿ. ಮತ್ತು ತಮಿಳುನಾಡಿನ ಕೆ. ಕಾರ್ತಿಕ್ ಅವರು ಎಐಟಿಎ ಓಪನ್ ವೀಲ್ಚೇರ್ ಟೆನಿಸ್ ಟೂರ್ನಿಯ ಕ್ರಮವಾಗಿ ಮಹಿಳೆಯರ ಮತ್ತು ಪುರುಷ ಸಿಂಗಲ್ಸ್ ವಿಭಾಗಗಳಲ್ಲಿ ಶನಿವಾರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ (ಕೆಎಸ್ಎಲ್ಟಿಎ) ಆಶ್ರಯದಲ್ಲಿ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್ ಎಕ್ಸ್ಲೆನ್ಸ್ ಸೆಂಟರ್ನಲ್ಲಿ ನಡೆದ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಶಿಲ್ಪಾ ಕೆ.ಪಿ 7-6 (3), 6-0ರಿಂದ ರಾಜ್ಯದವರೇ ಆದ ಪ್ರತಿಮಾ ರಾವ್ ಅವರನ್ನು ಮಣಿಸಿದರು. ಪ್ರತಿಮಾ ಅವರ ತೀವ್ರ ಪೈಪೋಟಿಯನ್ನು ಮೀರಿದ ಅಗ್ರಶ್ರೇಯಾಂಕದ ಶಿಲ್ಪಾ ಗೆಲುವಿನ ನಗೆ ಬೀರಿದರು.
ಪುರುಷರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ಕಾರ್ತಿಕ್ 6-1, 6-3ರಿಂದ ಕರ್ನಾಟಕದ ಶೇಖರ್ ವೀರಸ್ವಾಮಿ ಎದುರು ಗೆದ್ದರು. ಅಗ್ರಶ್ರೇಯಾಂಕದ ಕಾರ್ತಿಕ್ ಸುಲಭ ಜಯ ಸಂಪಾದಿಸಿ, ಪ್ರಶಸ್ತಿ ಎತ್ತಿ ಹಿಡಿದರು.
ಪುರುಷರ ಡಬಲ್ಸ್ ಪ್ರಶಸ್ತಿಯು ಶೇಕರ್ ಮತ್ತು ತಮಿಳುನಾಡಿನ ಎಸ್. ಬಾಲಚಂದರ್ ಅವರಿಗೆ ಒಲಿಯಿತು. ಫೈನಲ್ ಹಣಾಹಣಿಯಲ್ಲಿ ಈ ಜೋಡಿಯು 3-6, 6-2, 15-13ರಿಂದ ತಮಿಳುನಾಡಿನ ಕಾರ್ತಿಕ್ ಮತ್ತು ಡಿ. ಮರಿಯಪ್ಪನ್ ಅವರನ್ನು ಮಣಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.