ಕಲಬುರಗಿ: ಎಳೆಬಿಸಿಲಿನ ವಾತಾವರಣದಲ್ಲಿ ಮನಸಿಗೆ ತಂಪು ನೀಡುವಂತೆ ಆಟವಾಡಿದ ಕರ್ನಾಟಕದ ಮನೀಷ್ ಗಣೇಶ್ ಕಲಬುರಗಿ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ರಾಜ್ಯದ ಇನ್ನೊಬ್ಬ ಆಟಗಾರ ಆದಿಲ್ ಕಲ್ಯಾಣಪುರ ಅವರಿಗೆ ನಿರಾಸೆ ಕಾಡಿತು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಮಂಗಳವಾರ ಮೈಸೂರಿನ ‘ಸೈನಿಕ’ ಮನೀಷ್ 6–1, 6–2ರಿಂದ ಜಪಾನ್ನ ಯುಚಿರೊ
ಇನುಯಿ ಅವರನ್ನು ಪರಾಭವಗೊಳಿಸಿ ಎರಡನೇ ಸುತ್ತು ಪ್ರವೇಶಿಸಿದರು. ಈ ಮೂಲಕ ಮೊದಲ ಎಟಿಪಿ ಪಾಯಿಂಟ್ ಗಳಿಸಿದರು.
ಭಾರತೀಯ ಸೇನೆಯಲ್ಲಿರುವ ಮನೀಷ್, ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ. ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಆದಿಲ್ ಕಲ್ಯಾಣಪುರ ಉತ್ತಮ ಪೈಪೋಟಿ ನೀಡಿದರೂ 4–6, 3–6ರಿಂದ ಗುಜರಾತ್ನ ಆರ್ಯನ್ ಶಾ ಎದುರು ಸೋಲನ್ನು ಅನುಭವಿಸಿದರು.
ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಭಾರತದ ರಾಘವ್ ಜೈಸಿಂಘಾನಿ 6–4, 6–3ರಿಂದ ಸ್ವದೇಶದ ಶಿವಾಂಕ್ ಭಟ್ನಾಗರ್ ಎದುರು, ಭಾರತದ ಹಂಸ್ ಕಬೀರ್ 5–7, 6–4, 6–2ರಿಂದ ಹಾ ಮಿನ್ ಡಕ್ ವು ವಿರುದ್ಧ, ಜಪಾನ್ನ ರೂಕಿ ಮತ್ಸುದಾ 6–2, 6–1ರಿಂದ ಭಾರತದ ಸಿದ್ಧಾಂತ್ ಬಂತಿಯಾ ಮೇಲೆ, ಭಾರತದ ಕರಣ್ ಸಿಂಗ್ 6–4, 6–2ರಿಂದ ಸ್ವದೇಶದ ರಂಜೀತ್ ಮುರುಗೇಶನ್ ಎದುರು, ಜಪಾನ್ನ ತಗುಚಿ ರಿಯೊತಾರೊ 6–3, 5–7, 6–3ರಿಂದ ಕೊರಿಯಾದ ಯುನ್ಸೆಕ್ ಜಾಂಗ್ ವಿರುದ್ಧ ಗೆದ್ದು ಮುನ್ನಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.