ADVERTISEMENT

ಮಂಗಳೂರು: ಸೋಂಕು ನಿವಾರಣೆ ಉಪಕರಣ ಅಭಿವೃದ್ಧಿಪಡಿಸಿದ ಎನ್‌ಐಟಿಕೆ

ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಎನ್‌ಐಟಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
ಡಾ.ಅರುಣ್‌ ಇಸ್ಲೂರ್‌ ಅಭಿವೃದ್ಧಿ ಪಡಿಸಿರುವ ‘ಝೀರೋ–ಸಿಒವಿ’ ಉಪಕರಣ
ಡಾ.ಅರುಣ್‌ ಇಸ್ಲೂರ್‌ ಅಭಿವೃದ್ಧಿ ಪಡಿಸಿರುವ ‘ಝೀರೋ–ಸಿಒವಿ’ ಉಪಕರಣ   

ಮಂಗಳೂರು: ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ತಯಾರಿಸಿ ವಿತರಿಸಿದ ಎನ್ಐಟಿಕೆ, ಇದೀಗ ವಸ್ತುಗಳ ಮೇಲ್ಮೈಯನ್ನು ಕಲುಷಿತಗೊಳಿಸುವ ವೈರಸ್ ಅನ್ನು ನಾಶಮಾಡಲು ‘ಸೋಂಕು ನಿವಾರಣೆ ಉಪಕರಣ’ವನ್ನು ಅಭಿವೃದ್ಧಿಪಡಿಸಿದೆ.

ಎನ್‌ಐಟಿಕೆ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ, ಡಾ.ಅರುಣ್ ಎಂ. ಇಸ್ಲೂರ್ ಅವರು ಸಂಶೋಧನಾ ವಿದ್ಯಾರ್ಥಿ ಸೈಯದ್ ಇಬ್ರಾಹಿಂ ಅವರೊಂದಿಗೆ ಸೇರಿ, ‘ಝೀರೊ ಸಿಒವಿ’ ಎಂಬ ಸೋಂಕು ನಿವಾರಕ ಉಪಕರಣವನ್ನು ಅಭಿವೃದ್ಧಿ
ಪಡಿಸಿದ್ದಾರೆ. ಈ ಉಪಕರಣವು ವಸ್ತುಗಳ ಮೇಲ್ಮೈಯಲ್ಲಿ ಇರುವ ಕೊರೊನಾ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ನಿಯಂತ್ರಿಸುತ್ತದೆ.

‘ತರಕಾರಿಗಳು, ನೋಟುಗಳು ಸೇರಿದಂತೆ ವಸ್ತುಗಳನ್ನು 15 ನಿಮಿಷ ಈ ಉಪಕರಣದಲ್ಲಿ ಇರಿಸುವ ಮೂಲಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಿಷ್ಕ್ರಿಯ ಮಾಡಬಹುದಾಗಿದೆ. ನಿಷ್ಕ್ರಿಯತೆ ಶೇ 99.9ರಷ್ಟಿದೆ’ ಎಂದು ಪ್ರೊಫೆಸರ್ ಇಸ್ಲೂರ್ ತಿಳಿಸಿದ್ದಾರೆ.

ADVERTISEMENT

‘ಯುವಿ-ಸಿ ವಿಕಿರಣ ತಂತ್ರಜ್ಞಾನವು 254 ನ್ಯಾನೊಮೀಟರ್ ತರಂಗಾಂತರವನ್ನು ಹೊಂದಿದ್ದು, ಮೇಲ್ಮೈಗಳಲ್ಲಿರುವ ಯಾವುದೇ ಸೂಕ್ಷ್ಮಜೀವಿಗಳ ನ್ಯೂಕ್ಲಿಯಿಕ್ ಆಮ್ಲಗಳನ್ನು ನಾಶಪಡಿಸುತ್ತದೆ. ಯುವಿ ತಂತ್ರಜ್ಞಾನವು ವೈಜ್ಞಾನಿಕ ಸಮು
ದಾಯಕ್ಕೆ ಉತ್ತಮ ಎಂದು ಸಾಬೀತಾಗಿದೆ. ಮೇಲ್ಮೈ ವೈರಾಣುಗಳನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಈ ತಂತ್ರ
ಜ್ಞಾನವನ್ನು ಶಿಫಾರಸು ಮಾಡಿದೆ. ಇದನ್ನು ಸಾಮಾನ್ಯವಾಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಲ್ಲಿ ಬಳಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಈ ಉಪಕರಣವು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಕಿಟ್‌ಗಳು, ಶಸ್ತ್ರಚಿಕಿತ್ಸಾ ಮುಖವಾಡಗಳು, ತರಕಾ
ರಿಗಳು, ಪ್ಯಾಕ್ ಮಾಡಿದ ಆಹಾರ ವಸ್ತುಗಳು, ನೋಟುಗಳು ಮತ್ತು ಇತರ ದಿನನಿತ್ಯದ ವಸ್ತುಗಳನ್ನು ಸೋಂಕುರಹಿತ ಮಾಡಲಿದೆ.

ಕೆಲವು ಬದಲಾವಣೆಗಳೊಂದಿಗೆ ಹಳೆಯ ರೆಫ್ರಿಜರೇಟರ್ ಅನ್ನು ಸೋಂಕುನಿವಾರಕ ಕೊಠಡಿಯಾಗಿ ಪರಿವರ್ತಿಸಲಾಗಿದೆ. ಇದನ್ನು ಎನ್ಐಟಿಕೆ ನಿರ್ದೇಶಕ ಪ್ರೊ.ಕೆ.ಕೆ. ಉಮಾ ಮಹೇಶ್ವರ ರಾವ್ ಮತ್ತು ಅವರ ಪತ್ನಿ, ಎಕ್ಕೂರು ಕೇಂದ್ರೀಯ ವಿದ್ಯಾಲಯ –2 ರ ಮುಖ್ಯ ಶಿಕ್ಷಕಿ ನೀರಜಾ ರಾವ್ ಅವರಿಗೆ ಹಸ್ತಾಂತರಿಸಲಾಯಿತು.

ಡೀನ್ ಪ್ರೊ.ಎಂ.ಎಸ್.ಭಟ್, ಉಪನಿರ್ದೇಶಕ ಪ್ರೊ.ಅನಂತ ನಾರಾಯಣನ್ ಮತ್ತು ಡೀನ್ ಪ್ರೊ.ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.