ನವದೆಹಲಿ: 'ನೀವು ಒಂಟಿತನದ ಚಿಂತೆ ಮಾಡಬೇಡಿ, ಇಡೀ ದೇಶವೇ ನಿಮ್ಮ ಜೊತೆ ಇದೆ' ಎಂದು ಯೋಧರಿಗೆಬಾಲಕಿ ಮಾನ್ವಿ ಬರೆದಹೃದಯಸ್ಪರ್ಶಿ ಪತ್ರ ವೈರಲ್ ಆಗಿದೆ.
ಚಾಂದಿನಿ ಚೌಕ್ ಮೆಟ್ರೊ ರೈಲು ನಿಲ್ದಾಣದಲ್ಲಿ ಕಾವಲು ಗಸ್ತಿನಲ್ಲಿದ್ದ ಯೋಧನಿಗೆ ಮಾನ್ವಿ, ದೀಪಾವಳಿ ಶುಭಾಶಯ ಕೋರಿ ಬರೆದಿದ್ದ ಪತ್ರ ನೀಡಿದ್ದಾಳೆ. ಆದರೆ ಆಕೆಯ ವಿಳಾಸತಿಳಿದು ಬಂದಿಲ್ಲ. ಸೈನಿಕರ ಸೇವೆಯನ್ನು ಶ್ಲಾಘನೆ ಮಾಡಿ ಬರೆದಿರುವ ಈ ಮನಮಿಡಿಯುವ ಪತ್ರವನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್ಎಫ್) ತನ್ನ ಟ್ವಿಟರ್ ಪೇಜ್ನಲ್ಲಿ ಪ್ರಕಟಿಸಿದೆ.
ಪ್ರೀತಿಯ ಪೊಲೀಸ್ ಅಧಿಕಾರಿಗಳೇ ಹಾಗೂ ಸೈನಿಕರೇ ನಿಮ್ಮ ಸೇವೆ, ತ್ಯಾಗ, ಬಲಿದಾನಕ್ಕೆ ದೇಶವೇ ಹೆಮ್ಮೆ ಪಡುತ್ತಿದೆ. ನೀವು ಯಾವತ್ತು ಒಂಟಿ ಎಂದು ಚಿಂತಿಸಬೇಡಿ, ನಿಮ್ಮ ಮತ್ತು ನಿಮ್ಮ ಕುಟುಂಬದವರ ಜೊತೆ ಇಡೀ ದೇಶವೇಇದೆ.ದೇಶಕ್ಕಾಗಿ ನೀವು ಮಾಡುತ್ತಿರುವ ಸೇವೆ ನಮಗೆ ಹೆಮ್ಮೆ ತರಿಸಿದೆ. ನಿಮಗೆ ನನ್ನ ನಮಸ್ಕಾರಗಳು ಎಂದು ಮಾನ್ವಿ ಬರೆದಿದ್ದಾಳೆ.
ದೇಶದ ಪೊಲೀಸರು ಮತ್ತು ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳು, ದೇವರು ಆರೋಗ್ಯ ಮತ್ತು ಸುಖ ಸಮೃದ್ದಿಯನ್ನು ಕರುಣಿಸಲಿ ಎಂದು ಮಾನ್ವಿ ಪತ್ರದಲ್ಲಿ ತಿಳಿಸಿದ್ದಾಳೆ.
ಈ ಹೃದಯಸ್ಪರ್ಶಿಯ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.