ADVERTISEMENT

‘ಇಂದಿರಾನಗರ್ ಕಾ ಗೂಂಡಾ’ ರಾಹುಲ್ ದ್ರಾವಿಡ್‌ ಬಗ್ಗೆ ಟ್ವೀಟಿಗರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 2:55 IST
Last Updated 10 ಏಪ್ರಿಲ್ 2021, 2:55 IST
ರಾಹುಲ್ ದ್ರಾವಿಡ್‌ (ಎಎಫ್‌ಪಿ ಸಂಗ್ರಹ ಚಿತ್ರ)
ರಾಹುಲ್ ದ್ರಾವಿಡ್‌ (ಎಎಫ್‌ಪಿ ಸಂಗ್ರಹ ಚಿತ್ರ)   

ಬೆಂಗಳೂರು: ಜಾಹೀರಾತೊಂದರಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿರುವ ಬೆನ್ನಲ್ಲೇ ಟ್ವಿಟರ್‌ನಲ್ಲೂ ಅವರು ಟ್ರೆಂಡ್‌ ಆಗಿದ್ದಾರೆ.

'ದಿ ವಾಲ್' ಖ್ಯಾತಿಯ ದ್ರಾವಿಡ್ ನಟನೆಯ ಬಗ್ಗೆ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರೂ ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಪಿಜ್ಜಾಹಟ್, ಜೊಮ್ಯಾಟೊ ಸೇರಿದಂತೆ ಹಲವು ಕಂಪನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳು ತರಹೇವಾರಿ ಟ್ವೀಟ್‌ಗಳನ್ನು ಮಾಡಿದ್ದಾರೆ.#IndiraNagarkaGundaಮತ್ತು #Rahuldravidಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ.

‘ಇಂದಿರಾನಗರ ಸುತ್ತಮುತ್ತ ಆಹಾರ ವಿತರಣೆ ಸ್ವಲ್ಪ ತಡವಾಗಬಹುದು. ಯಾಕೆಂದರೆ ಕ್ರೋಧದಿಂದ ಕುದಿಯುತ್ತಿರುವ ಗೂಂಡಾ ಒಬ್ಬರು ಅಲ್ಲಿದ್ದಾರೆ’ ಎಂದು ಜೊಮ್ಯಾಟೊ ಟ್ವೀಟ್ ಮಾಡಿದೆ. ಮುಂದುವರಿದು ಮತ್ತೊಂದು ಟ್ವೀಟ್‌ನಲ್ಲಿ, ‘ಕೆಲವರು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ರಸ್ತೆಗಳಲ್ಲಿ ಗೂಂಡಾ ಇಲ್ಲ. ಗೋಡೆ ಇರಬಹುದು’ ಎಂದು ಮತ್ತೊಂದು ಟ್ವೀಟ್ ಮಾಡಿದೆ.

ADVERTISEMENT

‘ನಮ್ಮ ಇಂದಿರಾನಗರ ಶಾಖೆಯ ಹೊರಭಾಗದಲ್ಲಿ ಒಬ್ಬ ಗೂಂಡಾ ಕಾಣಿಸಿದ್ದಾರೆ. ಅವರನ್ನು ಪಿಜ್ಜಾ ನೀಡಿ ಸಮಾಧಾನಪಡಿಸಲು ಕರೆಸಿಕೊಂಡಿದ್ದೇವೆ. ಬೇಸರಿಸಬೇಡಿ’ ಎಂದು ‘ಪಿಜ್ಜಾ ಹಟ್ ಇಂಡಿಯಾ’ ಟ್ವೀಟ್ ಮಾಡಿದೆ.

‘ಇಂದಿರಾನಗರದಲ್ಲಿ ಭಾರಿ ಕೋಪಗೊಂಡಿರುವ ಗೂಂಡಾ ವಾಹನಗಳನ್ನು ಜಖಂಗೊಳಿಸುತ್ತಿರುವ ಬಗ್ಗೆ ವರದಿಗಳು ಬಂದಿವೆ. ಅವರು ಇತರರೆಡೆಗೆ ಆಹಾರವನ್ನು ಬಿಸಾಡುತ್ತಿದ್ದರು. ಅವರಿಗೆ ತುಂಬಾ ಹಸಿವಾದಂತೆ ಕಾಣಿಸುತ್ತಿದೆ. ನಾವು ಅವರಿಗಾಗಿ ಕೆಲವು ಥೆಪ್ಲಾಗಳನ್ನು ಇರಿಸಿದ್ದೇವೆ. ನೀವು ಇಂದಿರಾನಗರಕ್ಕೆ ಹೋದರೆ ಅವರಿಗೆ ತಿಳಿಸಿ’ ಎಂದು ಚೀವ್‌ಡಾ ಟ್ವೀಟ್ ಮಾಡಿದೆ.

‘ನನಗೆ ಸ್ನೇಹಿತರಿದ್ದಾರೆ ಮತ್ತು ಇಂದಿರಾನಗರದಿಂದ ಅಪಾಯಕಾರಿ ಸ್ನೇಹಿತರೂ ಇದ್ದಾರೆ’ ಎಂದು ಫುಟ್‌ಬಾಲ್ ಆಟಗಾರ ಗುರುಪ್ರೀತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

‘ಈ ವ್ಯಕ್ತಿ ವಿಭಿನ್ನ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಂದೇ ಒಂದು ಜಾಹೀರಾತಿನಿಂದ ಇಡೀ ಇಂಟರ್ನೆಟ್ ಜಗತ್ತೇ ಮರುಳುಗೊಂಡಿದೆ. ಅವರ ಸಿಟ್ಟು ನೋಡಲು ಚೆನ್ನಾಗಿದೆ’ ಎಂದು ಧ್ರುವ ಚೌಧರಿ ಎಂಬವರು ಟ್ವಿಟ್ ಮಾಡಿದ್ದಾರೆ.

ದ್ರಾವಿಡ್ ಜಾಹೀರಾತಿನ ಬಗ್ಗೆ ಶುಕ್ರವಾರ ಅಚ್ಚರಿ ವ್ಯಕ್ತಪಡಿಸಿದ್ದ ಕೊಹ್ಲಿ, ದ್ರಾವಿಡ್ ಅವರ ಇಂತಹದೊಂದು ಮುಖವನ್ನು ಎಂದಿಗೂ ನೋಡಿಲ್ಲ ಎಂದು ಟ್ವೀಟ್ ಮಾಡಿದ್ದರು.

ದ್ರಾವಿಡ್‌ ನಟಿಸಿದ ಜಾಹೀರಾತಿನಲ್ಲೇನಿದೆ?

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಆನ್‌ಲೈನ್ ಅಪ್ಲಿಕೇಷನ್ ಒಂದು ಬಿಡುಗಡೆ ಮಾಡಿರುವ ಹೊಸ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್, ಕೋಪಗೊಳ್ಳುವ ಸನ್ನಿವೇಶವನ್ನು ಬಹಿರಂಗಪಡಿಸಲಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುವ ರಾಹುಲ್ ದ್ರಾವಿಡ್, ವಿಭಿನ್ನ ಹಾವ-ಭಾವಗಳ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿರುವುದನ್ನು ತೋರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.