ADVERTISEMENT

ನೋಟು ರದ್ದತಿಗೆ ಮೂರು ವರ್ಷ: ಟೀಕೆ, ವ್ಯಂಗ್ಯ, ತಮಾಷೆಯ ಸಂದೇಶಗಳು ವೈರಲ್

ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು #DeMonetisationDisaster #demonetization

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:35 IST
Last Updated 8 ನವೆಂಬರ್ 2019, 10:35 IST
ಸಾಂದರ್ಭಿಕ ಚಿತ್ರ: ಕೃಪೆ – ಟ್ವಿಟರ್‌
ಸಾಂದರ್ಭಿಕ ಚಿತ್ರ: ಕೃಪೆ – ಟ್ವಿಟರ್‌   

ಬೆಂಗಳೂರು:ಕೇಂದ್ರ ಸರ್ಕಾರವು ₹500 ಮತ್ತು ₹1,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿ ಇಂದಿಗೆ ಮೂರು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ‘ನೋಟು ರದ್ದತಿ’ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಕೇಂದ್ರದ ನಿರ್ಧಾರದಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಅದರಿಂದ ದೇಶ ಇನ್ನೂ ಚೇತರಿಸಿಲ್ಲ ಎಂದು ಅನೇಕರು ಟೀಕಿಸಿದ್ದಾರೆ. ಕೆಲವರು₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಿತ್ರಕ್ಕೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ! ಟೀಕೆ, ವ್ಯಂಗ್ಯಭರಿತ ಸಂದೇಶಗಳ ಜತೆಗೆ ಕೆಲವರು ನೋಟು ರದ್ದು ನಿರ್ಧಾರವನ್ನು ಸಮರ್ಥಿಸಿಯೂ ಸಂದೇಶಗಳನ್ನು ಪ್ರಕಟಿಸಿದ್ದಾರೆ.

ಟ್ವಿಟರ್‌ನಲ್ಲಿ #DeMonetisationDisaster,#demonetization,#NotebandiSeMandiTak, ಟ್ರೆಂಡ್ ಆಗಿವೆ.

ADVERTISEMENT

‘ನೋಟು ರದ್ದತಿಯ ನಂತರ ಕುಂಟುತ್ತಾ ಸಾಗುತ್ತಿದ್ದ ಸೇವಾ ವಲಯದ ಪ್ರಗತಿ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಆರಂಭದಲ್ಲಿಯೇ ತೀವ್ರ ಕುಸಿತದ ಹಾದಿ ಹಿಡಿದಿದೆ. ನಿರಂತರ ಏರಿಕೆ ಕಾಣುತ್ತಿರುವ ಕಚ್ಚಾ ಸಾಮಾಗ್ರಿಗಳ ಬೆಲೆ ಸೇರಿದಂತೆ ನೋಟು ರದ್ದತಿಯ ದುಷ್ಪರಿಣಾಮಗಳು ಇದಕ್ಕೆ ಮುಖ್ಯ ಕಾರಣ. #DeMonetisationDisaster’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಪ್ರಜಾವಾಣಿ ವರದಿ’ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

‘ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಉತ್ತಮ ಮತ್ತು ಕೆಲವು ಕೆಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆ ಪೈಕಿ ನೋಟು ರದ್ದತಿ ಕೆಟ್ಟ ನಿರ್ಧಾರ. ಹಾಗೆಂದು #DeMonetisationDisaster ಎನ್ನಬೇಕಾಗಿಲ್ಲ’ ಎಂದು ಆದಿತ್ಯ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನೋಟು ರದ್ದತಿಯಿಂದ ಕಾಂಗ್ರೆಸ್‌ಗೆ ತೊಂದರೆಯಾಗಿದೆ. 2019ರ ಲೋಕಸಭೆಯ ಚುನಾವಣೆಯಲ್ಲಿ ಪಕ್ಷವು2014ರ ಲೋಕಸಭೆ ಚುನಾವಣೆಗಿಂತಲೂ ಹೆಚ್ಚು, ಅಂದರೆ ₹840 ಕೋಟಿ ಖರ್ಚು ಮಾಡಿದೆ’ ಎಂದು ಆದಿತ್ಯ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ಮೋದಿಜೀ ಅವರ ಮಾಸ್ಟರ್ ಸ್ಟ್ರೋಕ್’ ಎಂದು ಪ್ರಿಯದರ್ಶಿನಿ ನಾಯಕ್ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ನೋಟು ರದ್ದು ನಿರ್ಧಾರ ಪ್ರಕಟಿಸಿ ಮೂರು ವರ್ಷಗಳಾದವು. ₹2000 ಮುಖಬೆಲೆಯ ನೋಟಿನಲ್ಲಿ ಜಿಪಿಎಸ್ ಚಿಪ್ ಹುಡುಕುವುದು ಇನ್ನೂ ಸಾಧ್ಯವಾಗಿಲ್ಲ. ದಯಮಾಡಿ ಸಹಾಯಮಾಡಿ’ ಎಂದು ಅರಿಂದಮ್ ಮಂಡಲ್ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ನವೆಂಬರ್ 8 ಅನ್ನು ಭಾರತದ ಮೂರ್ಖರ ದಿನವೆಂದು ಕರೆಯಬೇಕು’ ಎಂದು ರಂಜನ್ ಕೆ ಸಾಹೂ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನೋಟು ರದ್ದತಿಯ ಮೂರನೇ ವರ್ಷದ ಸ್ಮರಣೆ’ ಎಂದು ಹರ್‌ಜೀತ್ ರಾಂಧವಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರೇ, ಗುಲಾಬಿ, ಹಸಿರು, ಕಿತ್ತಳೆ,ನೇರಳೆ, ಕಂದು ಬಣ್ಣಗಳ ನೋಟು ಇಲ್ಲಿವೆ. ಆದರೆ ಕಪ್ಪು ಹಣ ಎಲ್ಲಿದೆ?’ ಎಂದು ಕಪ್ತಾನ್ ಮಲಿಕ್ ಎಂಬುವವರು ಪ್ರಶ್ನಿಸಿದ್ದಾರೆ.

ಇನ್ನಷ್ಟು ಟ್ವೀಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.