ನವದೆಹಲಿ (ಪಿಟಿಐ): ‘ಖಾಸಗಿತನ ಕುರಿತ ವಾಟ್ಸ್ಆ್ಯಪ್ನ ನೂತನ ನೀತಿಯು ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವಾಟ್ಸ್ಆ್ಯಪ್ ಜಾಲತಾಣ ಸಂಸ್ಥೆಗೆ ನಿರ್ದೇಶನ ನೀಡಬೇಕು’ ಎಂದು ಕೇಂದ್ರ ಸರ್ಕಾರ ದೆಹಲಿ ಕೋರ್ಟ್ಗೆ ಕೋರಿದೆ.
ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠದೆದುರು ಈ ನಿಲುವು ತಿಳಿಸಿದ ಕೇಂದ್ರ ಸರ್ಕಾರ, ಖಾಸಗಿತನ ನೀತಿಯು ಮೇ 15ರಿಂದ ಜಾರಿಗೆ ಬಂದಿದೆ ಎಂದು ಹೇಳಿದೆ. ವಾಟ್ಸ್ಆ್ಯಪ್ನ ನೂತನ ನೀತಿಯನ್ನು ಪ್ರಶ್ನಿಸಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ.
ಪೀಠಕ್ಕೆ ತನ್ನ ಅಭಿಪ್ರಾಯ ತಿಳಿಸಿದ ವಾಟ್ಸ್ಆ್ಯಪ್, ನೂತನ ನೀತಿಯು ಮೇ 15ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಆದರೆ, ನೀತಿಯನ್ನು ಒಪ್ಪದ ಯಾವುದೇ ಬಳಕೆದಾರರ ಖಾತೆಗಳನ್ನು ನಾವು ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕಾಗಿ ಏಕರೂಪದ ಸಮಯ ನಿಗದಿಪಡಿಸಿ. ಪ್ರತಿ ಖಾತೆಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಕೈಬಿಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿತು.
ನೂತನ ನೀತಿಯು ವ್ಯಕ್ತಿಯ ಖಾಸಗಿತನದ ಹಕ್ಕು ಉಲ್ಲಂಘಿಸಲಿದೆ ಎಂಬುದರ ಬಗ್ಗೆ ತನ್ನ ಅಭಿಪ್ರಾಯವನ್ನು ದಾಖಲಿಸುವಂತೆ ಕೇಂದ್ರ, ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ಗೆ ಹೈಕೋರ್ಟ್ ಪೀಠವು ನೋಟಿಸ್ ಜಾರಿ ಮಾಡಿತು. ಈ ಹಂತದಲ್ಲಿ ವಾಟ್ಸ್ಆ್ಯಪ್ನ ಹೊಸ ನೀತಿ ದೇಶದ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಕೇಂದ್ರ ಸ್ಪಷ್ಟಪಡಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.