ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಆತ್ಮ ನಿರ್ಭರ್ ಭಾರತ್' ನಿಂದ ಪ್ರೇರಣೆ ಪಡೆದು ಮುಂಬೈ ಐಐಟಿ ವಿದ್ಯಾರ್ಥಿಗಳು ಡಾಕ್ಯುಮೆಂಟ್ ಸ್ಕ್ಯಾನರ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದಾರೆ.
ಸಿವಿಲ್ ಎಂಜಿನಿಯರಿಂಗ್ ಬಿ.ಟೆಕ್ ಅಂತಿಮ ವರ್ಷದಲ್ಲಿರುವ ಇಬ್ಬರು ವಿದ್ಯಾರ್ಥಿಗಳು 'ಎಐಆರ್ಸ್ಕ್ಯಾನರ್' (AIRScanner) ಉಚಿತ ಮೊಬೈಲ್ ಸ್ಕ್ಯಾನಿಂಗ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ರೋಹಿತ್ ಕುಮಾರ್ ಚೌಧರಿ ಮತ್ತು ಕೆವಿನ್ ಅಗರ್ವಾಲ್ ಎಐ ಆಧಾರಿತ ರೀಡಿಂಗ್ ಸಿಸ್ಟಂಟ್ ಮತ್ತು ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ.
'ಇಂಗ್ಲಿಷ್ ಓದಲು ಕಷ್ಟ ಪಡುವವರಿಗಾಗಿ ಅಕ್ಷರ ನೋಡಿ ಓದುವ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುತ್ತಿದ್ದೆವು. ಆದರೆ, ಸರ್ಕಾರ ಚೀನಾದ ಅಪ್ಲಿಕೇಷನ್ಗಳನ್ನು ನಿಷೇಧಿಸಿದ ನಂತರ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಬಹಳಷ್ಟು ಜನ ಸೂಕ್ತ ಆ್ಯಪ್ ಸಿಗದೆ ಪರದಾಡಿದರು. ಆಗಲೇ ನಾವು ನಮ್ಮ ಎಐಆರ್ ಆ್ಯಪ್ನೊಂದಿಗೆ ಸ್ಕ್ಯಾನಿಂಗ್ ಆಯ್ಕೆಯನ್ನೂ ಸೇರಿಸಲು ನಿರ್ಧರಿಸಿವೆ' ಎಂದು ರೋಹಿತ್ ಕುಮಾರ್ ಚೌಧರಿ ಹೇಳಿದ್ದಾರೆ.
ಎಐಆರ್ ಸ್ಕ್ಯಾನರ್ ಆ್ಯಪ್ ಬಳಕೆದಾರರ ಯಾವುದೇ ಮಾಹಿತಿ ಸಂಗ್ರಹಿಸಿಕೊಳ್ಳುವುದಿಲ್ಲ ಹಾಗೂ ಎಲ್ಲ ಡಾಕ್ಯುಮೆಂಟ್ಗಳು ಫೋನ್ನಲ್ಲೇ ಸಂಗ್ರಹಗೊಳ್ಳುತ್ತವೆ. ಇಲ್ಲಿ ಕ್ಲೌಡ್ ಸ್ಟೋರೇಜ್ ಬಳಕೆಯಾಗುವುದಿಲ್ಲ. ಇದರಿಂದಾಗಿ ಬಳಕೆದಾರರಿಗೆ ಸಂಪೂರ್ಣ ಸುರಕ್ಷತೆಯ ಭರವಸೆ ಸಿಗುತ್ತದೆ.
ಪ್ರಸ್ತುತ ಈ ಆ್ಯಪ್ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.