ಐಸ್ಟಾಕ್ ಚಿತ್ರ
ಶಾಧೂಲ್: ‘ಚುರುಕು ಬುದ್ಧಿಯ ಮಕ್ಕಳನ್ನು ಹೆರಬೇಕೆಂದರೆ ಹುಣ್ಣಿಮೆಯಂದು ಗರ್ಭ ಧರಿಸಬೇಡಿ’ ಎಂದು ಶಾಲಾ ವಿದ್ಯಾರ್ಥಿನಿಯರಿಗೆ ಮಧ್ಯಪ್ರದೇಶದ ಡಿಐಜಿ ನೀಡಿರುವ ಸಲಹೆಯ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.
ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಖಾಸಗಿ ಶಾಲೆಯ 10ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಐಜಿ ಸವಿತಾ ಸೊಹಾನೆ, ‘ಹೊಸ ತಲೆಮಾರಿನ ಮಕ್ಕಳನ್ನು ನೀವು ಭೂಮಿಗೆ ತರಬೇಕಿದೆ. ಅದಕ್ಕಾಗಿ ನಿಮ್ಮ ಸಿದ್ಧತೆ ಏನಿದೆ? ಪೂರ್ಣ ಹುಣ್ಣಿಮೆಯಂದು ಗರ್ಭ ಧರಿಸಬೇಡಿ. ಸೂರ್ಯನಿಗೆ ನೀರು ಸಮರ್ಪಿಸಿ ಪ್ರಾರ್ಥಿಸಿ. ಚುರಕು ಬುದ್ಧಿಯ ಮಗುವನ್ನು ಪಡೆಯಿರಿ’ ಎಂದು ಸಲಹೆ ನೀಡಿದ್ದಾರೆ. ಕೆಲ ತಿಂಗಳ ಹಿಂದಿನ ಈ ವಿಡಿಯೊ ಈಗ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿರುವ ಸವಿತಾ, ‘ನಾನು ಸಾಕಷ್ಟು ಪುರಾಣ ಪುಸ್ತಕಗಳನ್ನು ಓದುತ್ತೇನೆ. ಹಿಂದೂ ಧಾರ್ಮಿಕ ಮುಖಂಡರ ಪ್ರವಚನಗಳನ್ನು ಕೇಳುತ್ತೇನೆ. ಅದನ್ನು ಆಧರಿಸಿ ಉಪನ್ಯಾಸ ನೀಡಿದ್ದೇನೆ’ ಎಂದಿದ್ದಾರೆ.
ಹೆಣ್ಣು ಮಕ್ಕಳ ಕುರಿತು ಗೌರವಭಾವ ಮೂಡಿಸುವ ಪರಿಸರ ನಿರ್ಮಾಣದ ಕಾರ್ಯಕ್ರಮವಾದ ‘ಮೇ ಹೂಂ ಅಭಿಮನ್ಯು’ ಎಂಬುದರಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದರು.
31 ವರ್ಷಗಳ ಹಿಂದೆ ಪೊಲೀಸ್ ಇಲಾಖೆ ಸೇರುವ ಮೊದಲಿನಿಂದಲೂ ಶಾಲೆಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡುತ್ತಲೇ ಬಂದಿದ್ದೇನೆ. ಈವರೂ ನಾನು ನೀಡಿರುವ ಮಾಹಿತಿಯು ಧಾರ್ಮಿಕ ಜ್ಞಾನದಿಂದಲೇ ಪಡೆದದ್ದಾಗಿದೆ’ ಎಂದಿದ್ದಾರೆ.
‘ನನ್ನ ಒಂದು ಗಂಟೆಯ ಭಾಷಣದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲಾಗುತ್ತಿರುವ ಗಂಭೀರ ಸ್ವರೂಪದ ಅಪರಾಧಗಳ ಕುರಿತು ಮಾತನಾಡಿದ್ದೇನೆ. ಆದರೆ ಅದರಲ್ಲಿ ಮಕ್ಕಳನ್ನು ಹೆರುವ ಕುರಿತ ಸಣ್ಣ ಭಾಗವಷ್ಟೇ ವ್ಯಾಪಕವಾಗಿ ಹರಿದಾಡುತ್ತಿದೆ. ಉಳಿದದ್ದು ಎಲ್ಲಿಯೂ ಇಲ್ಲ’ ಎಂದು ಡಿಐಜಿ ಸವಿತಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.