ಗುರುಗ್ರಾಮ: ದೀಪಾವಳಿಗೆ ಪರಿಸರಕ್ಕೆ ಹಾನಿ ಮಾಡದೇ ಹಸಿರು ಪಟಾಕಿ ಅಥವಾ ದೀಪದ ಮೂಲಕ ಆಚರಿಸಿ ಎಂದು ಎಷ್ಟೇ ಕರೆ ಕೊಟ್ಟರೂ ಕೆಲವರು ಈ ಮಾತು ಕೇಳಿಸಿಕೊಳ್ಳುವುದಿಲ್ಲ. ಇನ್ನೂ ಕೆಲವರು ಅತಿರೇಕಕ್ಕೆ ಹೋಗಿ ಆಪತ್ತು ತಂದಿಟ್ಟುಕೊಳ್ಳುತ್ತಾರೆ.
ಇದೇ ರೀತಿ ಸಾರ್ವಜನಿಕರಿಗೆ ಅಪಾಯ ಆಗುವ ರೀತಿಯಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಹೋಗಿ ಗುರುಗ್ರಾಮದ ಮೂವರು ಯುವಕರು ಪೊಲೀಸ್ ಅಥಿತಿಗಳಾಗಿದ್ದಾರೆ.
ದೀಪಾವಳಿ ಪ್ರಯುಕ್ತ ಕಳೆದ ಅ.24 ರಂದು ರಾತ್ರಿ ಗುರುಗ್ರಾಮದ ಸೆಕ್ಟರ್ 3 ನಲ್ಲಿ ಹೆದ್ದಾರಿಗಳಲ್ಲಿ ಕಾರಿನ ಮೇಲೆ ಬಾಣ ಬಿರಿಸುಗಳನ್ನು ಹಾಗೂ ಪಟಾಕಿಗಳನ್ನು ಹಚ್ಚಿ ಮೋಜಿನಾಟ ಆಡುತ್ತಾ ಕಾರು ಚಲಾಯಿಸುತ್ತಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿತ್ತು.
ವಿಡಿಯೊ ಗಮನಿಸಿದ ಗುರುಗ್ರಾಮ ಸಾರ್ವಜನಿಕರು ಇಂತಹ ಹುಡುಗರಿಗೆ ಬುದ್ಧಿ ಕಲಿಸಲು ಮನವಿ ಮಾಡಿದ್ದರು. ಕಡೆಗೂ ಮಂಗನಾಟ ಮೆರೆದಿದ್ದ ಯುವಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರೂ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.