ADVERTISEMENT

ಹಿಂಸಾಚಾರದಿಂದ ‘ಗ್ರೇಟ್‌ ಪೇನ್’ ಎಂದ ಸೂಪರ್‌ಸ್ಟಾರ್ ರಜನಿ: ಟೀಕೆ–ಬೆಂಬಲ ಮಹಾಪೂರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2019, 2:01 IST
Last Updated 20 ಡಿಸೆಂಬರ್ 2019, 2:01 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದೇಶದ ವಿವಿಧೆಡೆ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಅತೀವ ನೋವಾಗಿದೆ.ಹಿಂಸಾಚಾರ ಮತ್ತು ಪುಂಡಾಡಿಕೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಆಗುವುದಿಲ್ಲ’ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಗುರುವಾರ ಟ್ವೀಟ್ ಮಾಡಿದ್ದರು.

‘ದೇಶದ ಹಿತಾಸಕ್ತಿ ಮತ್ತು ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಜನರು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗೆ ಹಿಂಸೆಯಿಂದ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ’ ಎಂದು ಮನವಿ ಮಾಡಿದ್ದರು.

ರಜನಿ ಹೇಳಿಕೆಯ ಪರ ಮತ್ತು ವಿರುದ್ಧ ಚರ್ಚೆ ಟ್ವಿಟರ್‌ನಲ್ಲಿ ಗರಿಗೆದರಿದೆ.#IStandWithRajinikanth (ರಜನಿ ಜೊತೆಗೆ ನಾನಿದ್ದೇನೆ) ಮತ್ತು#ShameOnYouSanghiRajini (ಸಂಘಿ ರಜನಿಗೆ ಧಿಕ್ಕಾರ) ಹ್ಯಾಷ್‌ಟ್ಯಾಗ್‌ಗಳು ಮತ್ತು Thalaivarಶುಕ್ರವಾರ ಟ್ವಿಟರ್‌ನ ಇಂಡಿಯಾ ಟ್ರೆಂಡ್ಸ್‌ನಲ್ಲಿ ಕ್ರಮವಾಗಿ 1 ಮತ್ತು 2ನೇ ಸ್ಥಾನ ಪಡೆದಿದ್ದವು.

ADVERTISEMENT

‘ಕೆಟ್ಟ ಆಲೋಚನೆಗಳು ಮೊದಲುನಮ್ಮನ್ನು ಆಕರ್ಷಿಸುತ್ತವೆ, ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಅಹಿಂಸೆ ಮತ್ತು ಉತ್ತಮ ಆಲೋಚನೆಗಳು ಆರಂಭದಲ್ಲಿ ನಮ್ಮ ಕಾರ್ಯಸಾಧುವಲ್ಲ ಎನಿಸಬಹುದು. ಆದರೆ ಶಾಶ್ವತ ಪರಿಹಾರಗಳನ್ನು ಒದಗಿಸುತ್ತದೆ. ನಾವೆಲ್ಲರೂ ವಿದ್ಯಾವಂತರು. ಶಾಂತಿಯುತವಾಗಿ ಪ್ರತಿಭಟಿಸೋಣ’ ಎಂದು ಅಭಿಮಾನಿಗಳು ಕರೆ ನೀಡಿದ್ದಾರೆ.

‘ರಜನಿಕಾಂತ್ ಸಹ ಪೌರತ್ವ ಮಸೂದೆಯನ್ನು ಒಪ್ಪುವುದಿಲ್ಲ. ಹಾಗೆಂದು ಅವರು ಹಿಂಸಾಚಾರವನ್ನು ಸಮರ್ಥಿಸಲು ಹೋಗುವುದಿಲ್ಲ. ಒಬ್ಬ ನಿಜವಾದ ಭಾರತೀಯ ಯೋಚಿಸುವ ರೀತಿಯಲ್ಲಿ ರಜನಿ ಯೋಚಿಸುತ್ತಿದ್ದಾರೆ’ ಎಂದು ಹಲವು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

‘ರಜನಿಕಾಂತ್ ಎಂದಿಗೂ ಜನಪರ ನಿಲುವು ತಳೆದವರಲ್ಲ. ಅಧಿಕಾರದಲ್ಲಿದ್ದವರನ್ನು ಓಲೈಸುವುದೇ ಅವರಿಗೆ ಸದಾ ಮುಖ್ಯ. ಮೇಲಿದ್ದವರು ಯಾವ ಹೇಳಿಕೆ ನೀಡು ಎನ್ನುತ್ತಾರೋ, ಅಂಥದ್ದೇ ಹೇಳಿಕೆಯನ್ನು ರಜನಿ ಕೊಡುತ್ತಾರೆ’ ಎಂದು ವಿರೋಧಿಗಳು ಹರಿಹಾಯ್ದಿದ್ದಾರೆ.

‘ಭಗತ್‌ ಸಿಂಗ್ ಒಂದು ವೇಳೆ ಈಗ ಬದುಕಿದ್ದಿದ್ದರೆ ಅವರಿಗೆ ರಜನಿಕಾಂತ್ ನೀಡುತ್ತಿದ್ದ ಸಲಹೆ ಏನಾಗಿರುತ್ತಿತ್ತು?’ ಎಂದು ಪ್ರಶ್ನಿಸಿರುವ ಮತ್ತೊಬ್ಬರು, ‘ಭಾರತಕ್ಕೆ ಕೆಲ ಉತ್ತಮ ನಾಯಕರು ಬೇಕಿದ್ದಾರೆ’ ಎಂದು ಕೆಲವರು ರಜನಿಕಾಂತ್‌ಗೆ ಆರ್‌ಎಸ್‌ಎಸ್‌ನ ಸಮವಸ್ತ್ರ ತೊಡಿಸಿರುವ ಚಿತ್ರದೊಂದಿಗೆ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.