ADVERTISEMENT

ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

`ನೋಡ ಬನ್ನಿ ನಮ್ಮ ಶೋಚಾಲಯ' (30.3.13, ಎಲ್.ಮಂಜುನಾಥ್) ಚಿತ್ರಲೇಖನದಿಂದ ಶಾಲಾ ಮಕ್ಕಳ ಶೋಚನೀಯ ಸ್ಥಿತಿ ತಿಳಿದು ಬಹಳ ದುಃಖವಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದಿದ್ದರೂ ಇನ್ನೂ ನಮ್ಮ ಮಕ್ಕಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವುದು ನಿಜಕ್ಕೂ ಶೋಚನೀಯ. ಶೌಚಾಲಯ ನಮ್ಮ ಹಕ್ಕು. ಶಿಕ್ಷಣ ಕಾಯ್ದೆಯ ಆಶಯ ಸಂಪೂರ್ಣವಾಗಿ ಈಡೇರಲೇಬೇಕು.
-ಎ.ಕೆ.ಅನಂತಮೂರ್ತಿ, ಬೆಂಗಳೂರು

`ಆಶಾವಾದಿ ಅಪ್ಪಯ್ಯ' (ಸಂಪಟೂರು ವಿಶ್ವನಾಥ್) ಲೇಖನ ಓದಿ ಗೊಂದಲ, ಒತ್ತಡಗಳಿಂದ ತುಂಬಿದ್ದ ನನ್ನ ಮನಸ್ಸು ನಿರಾಳವಾಯಿತು. ಮಾನಸಿಕ ತಜ್ಞರು, ಆಪ್ತ ಸಮಾಲೋಚಕರು ನಡೆಸುವ ಆಪ್ತ ಸಮಾಲೋಚನೆಯನ್ನು ಒಬ್ಬ ಅಪ್ಪಯ್ಯ ಮಾಡಿದ್ದು ಪ್ರಶಂಸನೀಯ. ಇಂತಹ ನೂರಾರು ಅಪ್ಪಯ್ಯಗಳು ಇದ್ದುಬಿಟ್ಟರೆ ನೊಂದು ಮುದುಡಿದ ಹಲವರ ಮನಸ್ಸುಗಳು ಅರಳಬಹುದು.
-ಬಿ.ಎಸ್.ಚಂದ್ರಶೇಖರ್, ಬೆಂಗಳೂರು

ಮಿನಿ ಕಥೆ `ಶಿಲ್ಪಿ'ಯಲ್ಲಿ (ಡಾ. ಕೆ.ಎಸ್.ಚೈತ್ರಾ) `ಉಷಾರ ಯಶಸ್ಸಿನ ಹಿಂದೆ ಒಬ್ಬರಲ್ಲ, ಹಲವು ಪುರುಷರಿದ್ದಾರೆ...' ಎಂದು ಹೊಗಳಿಸಿಕೊಳ್ಳುವ ಪುರುಷರಿಂದಲೇ ಶೋಷಣೆಗೆ ಒಳಗಾಗಿ, ಮೌನವಾಗಿ ನೋವನ್ನು ನುಂಗಿಕೊಂಡು, ಕಿರುನಗೆಯ ಮುಖವಾಡ ಧರಿಸಿ ದಿಟ್ಟತನದಿಂದ ತನ್ನ ಗುರಿಯತ್ತ ಸಾಗುವ ಉಷಾಳ ಜೀವನಗಾಥೆ ಮನ ಮಿಡಿಯುವಂತಿದೆ.
-ಸರಸ್ವತಿ ಶಂಕರ್, ಬೆಂಗಳೂರು

ADVERTISEMENT

`ಸಂಕ್ರಾಂತಿ ಪ್ರಬಂಧ ಸ್ಪರ್ಧೆ'ಯಲ್ಲಿ ಮೆಚ್ಚುಗೆ ಪಡೆದಿರುವ ನಾಗರತ್ನ ಚಂದ್ರಶೇಖರ್ ಅವರ `ಅಜ್ಜಿಯ ಅಂತರಂಗ' ಪ್ರಬಂಧ ಬಹಳ ಇಷ್ಟವಾಯಿತು. ಬರವಣಿಗೆ ರೂಪದಲ್ಲಿ ಮೂಡಿ ಬಂದ ಸ್ವಾನುಭವ ಕಂಡು ಕಣ್ಣುಗಳು ಒದ್ದೆಯಾದವು.
-ಉಮಾದೇವಿ, ಬೆಂಗಳೂರು

ತಲೆಗೆ ಬೆಲೆ ಕೊಡಿ (23.3.13 ಡಾ. ಸತೀಶ್ ಎಸ್.) ಲೇಖನದಲ್ಲಿ ತಲೆಯ ಮಹತ್ವವನ್ನು ಚೆನ್ನಾಗಿ ತಿಳಿಸಿದ್ದಾರೆ. ಹೆಲ್ಮೆಟ್‌ನ ಉಪಯೋಗ ಮತ್ತು ಹಿಂಬದಿ ವಾಹನ ಸವಾರರೂ ಹೆಲ್ಮೆಟ್ ಧರಿಸಬೇಕು ಎಂದು ಎಚ್ಚರಿಸುವ ಲೇಖನ ಸಂದರ್ಭೋಚಿತವಾಗಿತ್ತು. ಕ್ಷಯ ರೋಗದ ನಿರ್ಮೂಲನೆ ಬಗ್ಗೆ ತಿಳಿಸಿದ ಡಾ. ಡಿ.ಕೆ.ಮಹಾಬಲರಾಜು ಮತ್ತು ಡಾ. ಎಂ.ಡಿ.ಸೂರ್ಯಕಾಂತ ಅವರಿಗೆ ಧನ್ಯವಾದ. ಫಿಸಿಯೋಥೆರಪಿ ಕುರಿತ ಡಾ. ಎಂ.ಆರ್. ಶೇಖರ್ ಬಾಬು ಅವರ ಸಂದರ್ಶನ ಚೆನ್ನಾಗಿತ್ತು.
-ಬಿ.ಎಸ್.ಮುಳ್ಳೂರ, ಹಲಗತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.