ADVERTISEMENT

ವಿಸ್ತೃತ ಸಮಾಲೋಚನೆ ನಂತರವೇ ನೂತನ ಐಟಿ ನಿಯಮಗಳ ರಚನೆ: ಕೇಂದ್ರ ಸರ್ಕಾರ

ವಿಶ್ವಸಂಸ್ಥೆ ವರದಿಗಾರರಿಗೆ ಕೇಂದ್ರ ಸರ್ಕಾರದ ಉತ್ತರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 14:53 IST
Last Updated 20 ಜೂನ್ 2021, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ನೂತನ ಐಟಿ ನಿಯಮಗಳನ್ನು ರೂಪಿಸಿ, ಅಂತಿಮಗೊಳಿಸುವ ಮುನ್ನ ಸಂಬಂಧಪಟ್ಟವರೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯಗಳು ವಿಸ್ತೃತ ಸಮಾಲೋಚನೆ ನಡೆಸಿವೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಶ್ವಸಂಸ್ಥೆಯ ವಿಶೇಷ ವರದಿಗಾರರ ವಿಭಾಗದ ಪತ್ರಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, ನೂತನ ಐಟಿ ನಿಯಮಗಳನ್ನು ರೂಪಿಸುವುದಕ್ಕೂ ಮುನ್ನ ಕೈಗೊಂಡ ಚರ್ಚೆ, ಸಮಾಲೋಚನೆ ಹಾಗೂ ಕರಡು ಸಿದ್ಧಪಡಿಸಿದ ಪ್ರಕ್ರಿಯೆ ಕುರಿತು ವಿವರಿಸಿದೆ.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಣಿತರು, ನಾಗರಿಕ ಸಮಾಜ, ಉದ್ದಿಮೆಗಳ ಪ್ರತಿನಿಧಿಗಳೊಂದಿಗೆ ಎರಡೂ ಸಚಿವಾಲಯಗಳು ಸಮಾಲೋಚನೆ ನಡೆಸಿವೆ. ಕರಡು ನಿಯಮಗಳನ್ನು ರಚಿಸುವುದಕ್ಕೂ ಮುನ್ನ ಸಾರ್ಜನಿಕರಿಂದ ಸಲಹೆ–ಸೂಚನೆಗಳನ್ನು ಸಹ ಆಹ್ವಾನಿಸಲಾಗಿತ್ತು’ ಎಂದು ಕೇಂದ್ರ ಸರ್ಕಾರ ವಿವರಿಸಿದೆ.

ADVERTISEMENT

ವಿವಿಧ ವಲಯಗಳಿಂದ ಸ್ವೀಕರಿಸಿದ ಸಲಹೆ–ಸೂಚನೆಗಳ ಕುರಿತು ಅಂತರ್‌ ಸಚಿವಾಲಯದ ಸಭೆಯಲ್ಲಿ ಚರ್ಚೆ ನಡೆಸಿ, ನಂತರ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ಉತ್ತರಿಸಿರುವುದಾಗಿ ತಿಳಿಸಿದೆ.

‘ಸಾಮಾಜಿಕ ಮಾಧ್ಯಮವನ್ನು ಬಳಸುವ ಸಾಮಾನ್ಯ ನಾಗರಿಕನ ಸಬಲೀಕರಣವೂ ಮುಖ್ಯ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ರಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಹಂಚಿಕೊಳ್ಳುವ ವಿಷಯಗಳಿಂದ ಸಂಕಷ್ಟ/ಸಂಕಟ ಅನುಭವಿಸುವ ವ್ಯಕ್ತಿಯ ದೂರು–ಅಹವಾಲಿಗೆ ಪರಿಹಾರ ಸಿಗಬೇಕು ಎಂಬ ಉದ್ದೇಶವೂ ಇದೆ’ ಎಂದು ಸರ್ಕಾರ ಉತ್ತರಿಸಿದೆ.

‘ಉಗ್ರರ ನೇಮಕಾತಿ, ಅಶ್ಲೀಲ ಮಾಹಿತಿಯ ಪ್ರಸಾರ, ಸೌಹಾರ್ದಕ್ಕೆ ಧಕ್ಕೆ ತರುವ ವಿಷಯಗಳನ್ನು ಹಂಚಿಕೊಳ್ಳುವುದು, ಹಣಕಾಸು ವಂಚನೆ, ಹಿಂಸೆಗೆ ಪ್ರಚೋದನೆ, ಕಾನೂನು–ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಸಾಮಾಜಿಕ ಮಾಧ್ಯಮಗಳು, ಡಿಜಿಟಲ್‌ ವೇದಿಕೆಗಳು ಬಳಕೆಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಿತ್ತು’ ಎಂದು ಉತ್ತರಿಸುವ ಮೂಲಕ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

‘ಬಳಕೆದಾರರ ಖಾಸಗಿತನದ ಹಕ್ಕನ್ನು ಭಾರತ ಸರ್ಕಾರ ಗೌರವಿಸುತ್ತದೆ. ಈ ಅಂಶವನ್ನು ಪರಿಗಣಿಸಿಯೇ ನೂತನ ನಿಯಮಗಳನ್ನು ರೂಪಿಸಲಾಗಿದೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.