ADVERTISEMENT

ಆಸ್ತಿ ಮರುಹಂಚಿಕೆ: ರಾಹುಲ್ ಹೇಳಿಕೆ ಅಪಾಯಕಾರಿ ಎಂದ ಬಿಜೆಪಿ ಶಾಸಕ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 11:25 IST
Last Updated 24 ಏಪ್ರಿಲ್ 2024, 11:25 IST
<div class="paragraphs"><p>ಬಿಜೆಪಿ ಶಾಸಕ ಸುರೇಶ್ ಕುಮಾರ್</p></div>

ಬಿಜೆಪಿ ಶಾಸಕ ಸುರೇಶ್ ಕುಮಾರ್

   

ಬೆಂಗಳೂರು: ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹೇಳಿದ್ದಾರೆ. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ ಚಿಂತನೆ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್‌ ಟೀಕಿಸಿದ್ದಾರೆ.

‘ಯಾರಾದರೂ ದುಡಿದು ಆಸ್ತಿ ಸಂಪಾದನೆ ಮಾಡುವುದೇ ತಪ್ಪು ಎನ್ನುವ ಧೋರಣೆ ಕಾಂಗ್ರೆಸ್‌ ಪಕ್ಷದ್ದು. ಮತದಾರರು ಮತ ಚಲಾಯಿಸುವುದಕ್ಕೆ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಒಮ್ಮೆ ಓದಿಕೊಳ್ಳುವುದು ಸೂಕ್ತ’ ಎಂದು ಅವರು ‘ಕಾಂಗ್ರೆಸ್‌ ಡೇಂಜರ್‌’ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದರು.

ADVERTISEMENT

‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಗಣತಿ ಮಾಡಿ ದೇಶದ ಜನಸಂಖ್ಯೆ ಆಧಾರದಲ್ಲಿ ಸಂಪತ್ತಿನ ಮರುಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ಅಸಮಾನತೆ ಸರಿಪಡಿಸಲು ಪೂರಕ ಎಂಬುದು ಅವರ ಚಿಂತನೆ. ಕಷ್ಟಪಟ್ಟು ದುಡಿದವರ ಹಣವನ್ನು ಏನೂ ಕಷ್ಟಪಡದೇ ಇರುವವರಿಗೆ ಹಂಚುತ್ತೇವೆ ಎನ್ನುವುದು ಯಾವ ನ್ಯಾಯ?  ಇವರಿಗೆ ಮಾತ್ರ ದೆಹಲಿಯಲ್ಲಿ ತಾಯಿಗೊಂದು ಮನೆ, ಮಗನಿಗೊಂದು ಮನೆ ಬೇಕು. ದೇಶದ ಜನಸಾಮಾನ್ಯರು ಮಾತ್ರ ಆಸ್ತಿ ಮಾಡಬಾರದು. ಮಾಡಿದರೆ ಅದನ್ನು ಕಸಿದುಕೊಂಡು ವಿತರಣೆ ಮಾಡುತ್ತೇವೆ ಎನ್ನುತ್ತಾರೆ. ಇದು ಯಾವ ರೀತಿಯ ಸಂಪತ್ತಿನ ಮರುಹಂಚಿಕೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

‘ಅಮೆರಿಕಾದಲ್ಲಿರುವ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಯಾವುದೇ ವ್ಯಕ್ತಿ ಮೃತಪಟ್ಟರೆ ಆತನ ಪಿತಾರ್ಜಿತ ಆಸ್ತಿಯಲ್ಲಿ ಶೇ 45 ರಷ್ಟು ಮಕ್ಕಳಿಗೆ ಉಳಿದ ಶೇ 55 ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು ಎಂದಿದ್ದಾರೆ. ದೇಶ ವಿಭಜನೆ, ಜಾತಿ ವಿಭಜನೆ ಮಾಡಿರುವ ಕಾಂಗ್ರೆಸ್‌, ಉತ್ತರ ಭಾರತ– ದಕ್ಷಿಣ ಭಾರತ ಎಂದು ವಿಭಜಿಸಲು ಮುಂದಾಗಿದೆ. ಇದೀಗ ಜನರ ಆಸ್ತಿಗೂ ಕೈಹಾಕಲು ಕಾದು ನಿಂತಿದೆ. ಇದು ಉಗ್ರ ಎಡಪಂಥೀಯ ಚಿಂತನೆ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

ಕಾಂಗ್ರೆಸ್‌ ಮತ್ತು ಇಂಡಿ ಒಕ್ಕೂಟದ ಪ್ರಣಾಳಿಕೆಗಳನ್ನು ಗಮನಿಸಿದಾಗ ಭಾರತವನ್ನು ಅಧಃಪತನಕ್ಕೆ ಒಯ್ಯಲು ಟೊಂಕ ಕಟ್ಟಿ ನಿಂತಿರುವಂತೆ ಕಾಣುತ್ತಿದೆ.  ಕಮ್ಯುನಿಸ್ಟ್‌ ಪಕ್ಷಗಳು ಭಾರತದ ಅಣ್ವಸ್ತ್ರ ಶಕ್ತಿಯನ್ನು ಅಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಡಿಎಂಕೆ ಸನಾತನ ಧರ್ಮವನ್ನು ಹೊಸಕಿ ಹಾಕುವುದಾಗಿ ಹೇಳಿದೆ. ಈ ಮೂಲಕ ಇಂಡಿ ಒಕ್ಕೂಟ ಭಾರತದ ಭವಿಷ್ಯ ಮತ್ತು ರಕ್ಷಣೆಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರು ಗ್ರಾಮಾಂತರ ಮತ್ತು ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಸಾರ್ವಜನಿಕರಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿ ಗ್ಯಾರಂಟಿ ಕಾರ್ಡ್‌ಗೆ ₹10 ಸಾವಿರ ಕೊಡುವುದಾಗಿ ಆಮಿಷ ಒಡ್ಡುತ್ತಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಡೇಂಜರ್‌ ಪೋಸ್ಟರ್‌ನ ಕ್ಯು ಆರ್‌ ಕೋಡ್‌ ಮೂಲಕ ಕಾಂಗ್ರೆಸ್‌ನ ಅಪಾಯದ ಕುರಿತಾದ ಘಟನಾವಳಿಗಳನ್ನು ವೀಕ್ಷಿಸಬಹುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.