ADVERTISEMENT

ಸಾಲಮನ್ನಾ: ಸಂಸದರ ಮನೆಗೆ ಮುತ್ತಿಗೆ

ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:47 IST
Last Updated 10 ಜುಲೈ 2017, 11:47 IST

ಬಳ್ಳಾರಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಭಾನುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಳಿಕ ಸಂಸದ ಬಿ.ಶ್ರೀರಾಮುಲು ನಿವಾಸ ಮುಂದೆ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. 

ರಾಜ್ಯ ಸರ್ಕಾರ ಈಗಾಗಲೇ ಸಹಕಾರ ಸಂಘಗಳ ರೈತರ ಸಾಲ ಮನ್ನಾ ಮಾಡಿದೆ. ಇದರಿಂದ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹಳಷ್ಟು ರೈತರು ಸಾಲವನ್ನು ಪಡೆದಿದ್ದಾರೆ. ಸತತ ಬರಗಾಲದಿಂದ ರೈತರಲ್ಲಿ ಆರ್ಥಿಕ ಮುಗಟ್ಟು ಆವರಿಸಿದೆ. ಸಾಲ ಮರು ಪಾವತಿಸಲು ಅಸಕ್ತರಾಗಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಇದನ್ನು ಅರಿತುಕೊಂಡು ಈ ಕೊಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷ ಎಂ.ಹನುಮ ಕಿಶೋರ್ ಆಗ್ರಹಿಸಿದರು. ಸರಕು ಮತ್ತು ಸೇವಾ ತೆರಿಗೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಅಗತ್ಯ ಬೆಲೆಗಳ ಏರಿಕೆಯಿಂದ ಬಡವರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಜೆಎಸ್‌ಟಿ ಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಪದಾಧಿಕಾರಿಗಳಾದ ಅಸುಂಡಿ ಸೂರಿ, ಶರ್ಮಾಸ್, ಚಾಂದ್‌ ಬಾಷಾ, ಜೆ.ವಿ.ಮಂಜುನಾಥ, ಅನ್ನ ಪೂರ್ಣ, ಪ್ರವಳಿಕ, ನಾಗರಾಜ, ಧರ್ಮ, ಮೋಸಿನ್, ಸಮೀರ್, ಫಕೃದ್ಧೀನ್, ಮೆಹಬೂಬ್, ಸಾದಿಕ್, ಆರ್.ಶ್ವೇತಾ, ಪ್ರಮೀಳಾ, ರವಿಕುಮಾರ್, ನೂರ್ ಅಹಮದ್, ಬಿ.ಕೆ.ಅನಂತಕುಮಾರ್, ಸಿದ್ಧಾರ್ಥಗೌಡ, ಪ್ರೀತಿ ಇದ್ದರು.

***

‘ಪ್ರತಿಭಟನೆಗೆ ಕುಮ್ಮಕ್ಕು ಸರಿಯಲ್ಲ’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯ ಕರ್ತರಿಗೆ ಪ್ರತಿಭಟನೆ ಮಾಡಿ ಎಂದು ಸೂಚಿಸಿರುವುದು ಸರಿಯಲ್ಲ. ಈ ರೀತಿ ನಡೆದು ಕೊಳ್ಳುವುದು ಅವರ ಸ್ಥಾನಕ್ಕೆ ತಕ್ಕುವುದಲ್ಲ. ರಾಜ್ಯ ಸರ್ಕಾರ ಸಹಕಾರ ಸಂಘಗಳ ರೈತರ ಸಾಲಮನ್ನಾ ಮಾಡಿದ್ದು, ಮುಂದಿನ ವಿಧಾನಸಭೆ ಚುನಾ ವಣೆ ದೃಷ್ಟಿಕೋನದಿಂದ. ರೈತರ ಹಿತ ಕಾಪಾಡುವುದಾದರೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲಿ. ಈ ರೀತಿ ಯಾಗಿ ನಾಟಕ ಆಡುತ್ತಿರು ವುದು ಅವರಿಗೆ ಶೋಭೆ ತರುವುದಿಲ್ಲ.
  ಬಿ.ಶ್ರೀರಾಮುಲು, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.